ರೈತನಿಗೆ ಉತ್ತಮ ವರಮಾನ ತಂದುಕೊಂಡುವ ಸೌತೇಕಾಯಿ

ಆರೋಗ್ಯಕ್ಕೆ ಉತ್ತಮವಾದ ಸೌತೇಕಾಯಿ ಕೃಷಿ ಭಾರತದಲ್ಲಿ ಇತ್ತೀಚೆಗೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ.ಸೌತೇಕಾಯಿ ಬೇಸಿಗೆ ಕಾಲದ ಬೆಳೆಯಾಗಿದೆ....
ಸೌತೇಕಾಯಿ(ಸಾಂದರ್ಭಿಕ ಚಿತ್ರ)
ಸೌತೇಕಾಯಿ(ಸಾಂದರ್ಭಿಕ ಚಿತ್ರ)

ಆರೋಗ್ಯಕ್ಕೆ ಉತ್ತಮವಾದ ಸೌತೇಕಾಯಿ ಕೃಷಿ ಭಾರತದಲ್ಲಿ ಇತ್ತೀಚೆಗೆ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ.ಸೌತೇಕಾಯಿ ಬೇಸಿಗೆ ಕಾಲದ ಬೆಳೆಯಾಗಿದೆ. ಭಾರತಾದ್ಯಂತ ಎಲ್ಲಾ ರೀತಿಯ ಭೂಮಿಯಲ್ಲೂ, ಮಳೆಗಾಲ ಹಾಗೂ ಬೇಸಿಗೆಯಲ್ಲಿ ಬೆಳೆಯಬಹುದಾಗಿದೆ. ಸೌತೆಕಾಯಿಯನ್ನು ನೇರವಾಗಿ ಸೇವನೆ ಮಾಡಬಹುದು. ಇದು ದೇಹಕ್ಕೆ ತಂಪು ಒದಗಿಸುತ್ತದೆ ಮತ್ತು ಆರೋಗ್ಯಕರವೂ ಹೌದು.

ಎಲ್ಲಾ ವಿಧಧ ಮಣ್ಣಿನಲ್ಲಿಯೂ ಸೌತೇಕಾಯಿಯನ್ನು ಬೆಳೆಯಬಹುದಾಗಿದೆ. ಮರಳು ಮಿಶ್ರಿತ ಜೇಡಿ ಮಣ್ಣು ಸೌತೇಕಾಯಿ ಬೆಳೆಗೆ ಉತ್ತಮ. ಜನವರಿ- ಫೆಬ್ರವರಿ, ಜೂನ್ ಮತ್ತು ಜುಲೈ ತಿಂಗಳು ಸೌತೇಕಾಯಿ ಬಿತ್ತನೆಗೆ ಉತ್ತಮ ಸಮಯವಾಗಿದೆ. ಬೆಟ್ಟಪ್ರದೇಶಗಳಲ್ಲಿ ಏಪ್ರಿಲ್ ತಿಂಗಳಲ್ಲಿ ಸೌತೇಕಾಯಿ ಕೃಷಿ ಮಾಡಬಹುದಾಗಿದೆ.

ಬೇಸಿಗೆ ಕಾಲದಲ್ಲಿ ಸೌತೇಕಾಯಿ ಬೆಳೆ ಬೆಳೆಯುವುದರಿಂದ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಹೀಗಾಗಿ ಸೌತೇಕಾಯಿಗೆ ಹನಿ ನೀರಾವರಿ ಪದ್ಧತಿ ಉತ್ತಮವಾಗಿದೆ. ಈ ಪದ್ಧತಿಯಿಂದ ಭೂಮಿಯಲ್ಲಿ ಗಿಡದ ಬೇರುಗಳಿಗೆ ಅಗತ್ಯವಾದ ತೇವಾಂಶ ಒದಗಿಸಲು ಸಹಾಯವಾಗುತ್ತದೆ. ಇದು ಉಷ್ಣ ಪ್ರದೇಶದಲ್ಲಿ ಫಲಕಾರಿಯಾಗಿ ಬೆಳೆಯುವುದು. ಅತಿ ಉಷ್ಣಾಂಶವಿರುವ ಪ್ರದೇಶ ಸೂಕ್ತವಲ್ಲ. ಜೂನ್-ಜುಲೈ ಮತ್ತು ಜನವರಿ-ಫೆಬ್ರುವರಿ ತಿಂಗಳುಗಳು ಬಿತ್ತನೆಗೆ ಸೂಕ್ತ ಸಮಯ. ’ಜಪಾನೀಸ್ ಲಾಂಗ್ ಗ್ರೀನ್’ ಎಂಬುದು ಸೌತೆಯ ಎಂದು ಉತ್ತಮ ತಳಿ. ಅದು ಅಲ್ಪಾವಧಿ ತಳಿ. ತಳಿಯ ಹೆಸರೇ ಸೂಚಿಸುವಂತೆ ಕಾಯಿಗಳು ಉದ್ದವಾಗಿರುವುವು. ’ಚೈನಾ’ ತಳಿ ಉತ್ತಮ ಗುಣಮಟ್ಟ ಹೊಂದಿದ್ದು, ದೀರ್ಘಾವಧಿಯ ತಳಿಯಾಗಿದೆ.

ಸೌತೆಯ ಬಳ್ಳಿ ಸಸ್ಯ. ಸುಮಾರು ೨ ಮೀ. ಅಂತರದ ಸಾಲುಗಳಲ್ಲಿ ೭೫ ಸೆಂ.ಮೀ.ಗೆ ಒಂದರಂತೆ ಬಳ್ಳಿ ಬೆಳೆಸಬಹುದು. ೪-೫ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಬೇಕಾಗುವುದು. ನೀರು ಪೂರೈಕೆ ಮಣ್ಣು ಮತ್ತು ಹವಾಗುಣವನ್ನವಲಂಬಿಸಿರುತ್ತದೆ.

ಬೀಜ ಬಿತ್ತಿದ ಒಂದೂವರೆಯಿಂದ ಎರಡು ತಿಂಗಳಲ್ಲಿ ಬಳ್ಳಿಗಳು ಕಾಯಿ ಬಿಡಲು ಪ್ರಾರಂಭಿಸುತ್ತವೆ. ಎಳೆಯ ಕಾಯಿಗಳು ಒಂದು ಹಂತ ತಲುಪಿದ ಕೂಡಲೇ ಕೊಯ್ಲು ಮಾಡಬೇಕು. ಇಲ್ಲವಾದರೆ ಬಳ್ಳಿಗಳಲ್ಲೇ ಬಲಿತು ಹಣ್ಣಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವುದಿಲ್ಲ.ಇನ್ನು ಸೌತೇಕಾಯಿಯನ್ನು ಹೆಚ್ಚು ದಿನ ಸಂಗ್ರಹ ಮಾಡಿ ಇಡಲು ಸಾಧ್ಯವಿಲ್ಲ. ಬೇಗ ಹಾಳಾಗುವ ಕಾರಣದಿಂದ ಶೀಘ್ರವೇ ಸೌತೇಕಾಯಿಯನ್ನು ಮಾರಾಟ ಮಾಡಬೇಕಾಗುತ್ತದೆ. ಇನ್ನು ನಮ್ಮ ರಾಜ್ಯದಲ್ಲಿ ಶೈತ್ಯಾಗಾರ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಅನೇಕ ವೇಳೆ ಮಾರುಕಟ್ಟೆಯಲ್ಲಿಯೇ ಸೌತೇಕಾಯಿ ಹಾಳಾಗಿ ರೈತ ನಷ್ಟ ಅನುಭವಿಸುತ್ತಾನೆ.

ಇನ್ನು ಸೌತೇಕಾಯಿ ಗಿಡಕ್ಕೆ ರೋಗಕಾರಕ ಕೀಟ ತಗಲುವುದರಿಂದ ಕಾಲ ಕಾಲಕ್ಕೆ ತಕ್ಕ ಹಾಗೆ ಔಷಧಿ ಸಿಂಪಡನೆಯ ಅಗತ್ಯವಿದೆ. ಹೂವುಗಳು ಬರುವ ಸಮಯಕ್ಕೆ ಸರಿಯಾಗಿ ತಜ್ಞರಿಂದ ಸಲಹೆ ಪಡೆದುಕೊಂಡು ಔಷಧಿ ಸಿಂಪಡಿಸಬೇಕು.


ಇನ್ನು ಬೆಲೆಯ ವಿಷಯಕ್ಕೆ ಬಂದರೆ ಚಳಿಗಾಲದಲ್ಲಿ ಬಿಟ್ಟರೆ ಉಳಿದ ಎಲ್ಲಾ ಋತುಮಾನಗಳಲ್ಲಿಯೂ ಸೌತೇಕಾಯಿಗೆ ಉತ್ತಮ ಬೆಲೆಯಿರುತ್ತದೆ. ಬೇಸಿಗೆಯಲ್ಲಿ ಸೌತೆಕಾಯಿಗೆ ಬಂಪರ್ ಬೆಲೆ ಹೀಗಾಗಿ ಸೌತೇಕಾಯಿ ಬೆಳೆಯುವ ರೈತನಿಗೆ ಲಾಭ ಕಟ್ಟಿಟ್ಟ ಬುತ್ತಿ. ಆದರೆ ಎಲ್ಲೆಡೆ ಆಗುವಂತೆ ಈ ಬೆಳೆಗೂ ದಲ್ಲಾಳಿಗಳ ಹಾವಳಿ. ಮಧ್ಯವರ್ತಿಗಳಿಂದಾಗಿ ಬೆಳೆ ಬೆಳೆದ ರೈತನಿಗೆ ಉತ್ತಮ ಲಾಭ ಸಿಗುವಲ್ಲಿ ಸಮಸ್ಯೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com