ಬೆಂಗಳೂರು: ರಾಜ್ಯದಲ್ಲಿ ಮುಂಗಾರು ತೀವ್ರಗೊಂಡಿದ್ದು ಮುಂದಿನ 24 ಘಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು ದಕ್ಷಿಣದ ಒಳ ಭಾಗಗಳಲ್ಲಿ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ.
"ರಾಜ್ಯದಾದ್ಯಂತ ಮುಂಗಾರು ಚುರುಕುಗೊಂಡಿದ್ದು ಕರಾವಳಿ ಪ್ರದೇಶ, ಮಲೆನಾಡಿನ ಪಶ್ಚಿಮ ಘಟ್ಟಗಳು ಹಾಗೂ ಉತ್ತರ ಮತ್ತು ದಕ್ಷಿಣ ಕರ್ನಾಟಕದ ಒಳ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ" ಎಂದು ಹವಾಮಾನ ಇಲಾಖೆ ಅಧಿಕಾರಿ ಹೇಳಿದ್ದಾರೆ.
ಆಂಧ್ರಪ್ರದೇಶದ ಕರಾವಳಿ- ಬಂಗಾಳ ಕೊಲ್ಲಿಯಲ್ಲಿ ಇಂದು ಮುಂಜಾನೆ ವಾಯುಭಾರ ಕುಸಿತಗೊಂಡಿದ್ದು ಕರ್ನಾಟಕದಾದ್ಯಂತ ಮುಂಗಾರು ಮುಂದಿನ 48 ಘಂಟೆ ತೀವ್ರವಾಗಿರುತ್ತದೆ ಎಂದು ತಿಳಿದುಬಂದಿದೆ.
ಕಳೆದ 24 ಘಂಟೆಗಳಲ್ಲಿ ಕೂಡ ಕರ್ನಾಟಕದ ವಿವಿಧ ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಉಡುಪಿಯಲ್ಲಿ 60ಎಂಎಂ, ಕುಂದಾಪುರ ಮತ್ತು ಆಗುಂಬೆಯಲ್ಲಿ 50ಎಂಎಂ ಮತ್ತು ಮಂಗಳೂರು, ಬಂಟವಾಳ ಹಾಗೂ ಶಿರಾಲಿ ಯಲ್ಲಿ 40 ಮಿಲಿ ಮೀಟರ್ ಮಳೆ ದಾಖಲಾಗಿದೆ.
ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದ್ದು ಸಂಜೆ ಮತ್ತು ರಾತ್ರಿಯ ವೇಳೆಗೆ ತೀವ್ರ ಗಾಳಿಯಿಂದ ಕೂಡಿದ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರ ನಗರದಲ್ಲಿ ಕನಿಷ್ಠ ತಾಪಮಾನ 20.8 ಡಿಗ್ರಿ ಮತ್ತು ಗರಿಷ್ಠ 28.2 ಡಿಗ್ರಿ ಸೆಲ್ಷಿಯಸ್ ದಾಖಲಾಗಿದ್ದು, ಇದು ಸೋಮವಾರಕ್ಕೆ ಕ್ರಮವಾರಿ 20 ಡಿಗ್ರಿ ಮತ್ತು 27 ಡಿಗ್ರಿ ಸೆಲ್ಷಿಯಸ್ ಗೆ ಕುಸಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.