ಭಾರತದಲ್ಲಿ ಪ್ರಧಾನವಾಗಿ ಶಿವ-ವಿಷ್ಣು-ದೇವಿಯ ದೇವಾಲಯಗಳಿರುವುದರಿಂದ ಪ್ರಧಾನವಾಗಿ ಶೈವಾಗಮ, ವೈಷ್ಣವಾಗಮ, ಶಕ್ತಾಗಮಗಳು ಪ್ರಸಿದ್ಧ. ವಿಷ್ಣು ಹಾಗೂ ವಿಷ್ಣುವಿನ ಅವತಾರದ ಪ್ರತಿ ದೇವಾಲಯವೂ ನಿರ್ಮಾಣಗೊಂಡಿರುವುದು ವೈಷ್ಣವಾಗಮನದ ಪ್ರಕಾರವೇ. ಈ ವೈಷ್ಣವಾಗಮದಲ್ಲಿ ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಎರಡು ಪ್ರಕಾರಗಳಿದ್ದು ಪಾಂಚರತ್ರ ಆಗಮ ಹಾಗೂ ವೈಖಾನಸ ಆಗಮ ಎಂದು ವಿಂಗಡಿಸಲಾಗಿದೆ. ದೇವಾಲಯದ ಹೊರಭಾಗಕ್ಕೆ ಸಂಬಂಧಿಸಿದ್ದು ಪಾಂಚರತ್ರ ಆಗಮವಾದರೆ, ಗರ್ಭಗುಡಿಯಲ್ಲಿನ ಪ್ರತಿಷ್ಠಾಪನೆ, ಜೀರ್ಣೋದ್ಧಾರ, ನವೀಕರಣ ಸೇರಿದಂತೆ ಆಲಯದ ಒಳಭಾಗದಲ್ಲಿರುವ ಪ್ರಮುಖ ಕ್ರಿಯೆಗಳಿಗೆ ಸಂಬಂಧಿಸಿದ್ದು ವೈಖಾನಸ ಆಗಮ. ದೇವಾಲಯಗಳಿಗೆ ಪ್ರಕೃತಿ ವಿಕೋಪದಿಂದ ಹಾನಿಯುಂಟಾದರೆ ಅದನ್ನು ನವೀಕರಿಸಿ ಜೀರ್ಣೋದ್ಧಾರ, ನವೀಕರಾಣ ಕಾಮಗಾರಿಯನ್ನು ನಡೆಸುವುದೂ ಈ ಆಗಮಶಾಸ್ತ್ರಗಳ ಪ್ರಕಾರವೇ. ಯಾವುದೇ ಹಾನಿ ಸಂಭವಿಸದೇ ಇದ್ದರೂ ಸಹ ದೇವಾಲಯ ಶಿಥಿಲಾವಸ್ಥೆ ತಲುಪದೇ ಸುಸ್ಥಿರವಾಗಿರುವಂತೆ ಮುನ್ನೆಚ್ಚರಿಕಾ ಕ್ರಮ ವಹಿಸಲು ಪ್ರತಿ 12 ವರ್ಷಗಳಿಗೊಮ್ಮೆ ಕೆಲವು ವಿಧಿಗಳನ್ನು ಅನುಸರಿಸಲಾಗುತ್ತದೆ. ಈ ಎಲ್ಲವೂ ನಡೆಯುವುದು ಆಗಮಶಾಸ್ತ್ರಗಳ ಪ್ರಕಾರವೇ. ಈಗ ತಿರುಪತಿಯಲ್ಲಿ ನಡೆಯುತ್ತಿರುವ ಅಷ್ಟಬಂಧ ಬಾಲಾಲಯ ಮಹಾಸಂಪ್ರೋಕ್ಷಣೆ ನಡೆಯುವುದು ವೈಖಾನಸ ಆಗಮಗಳ ಪ್ರಕಾರ. ಅಂದರೆ ದೇವಾಲಯದ ಗರ್ಭಗುಡಿಯಿಂದ ಹಿಡಿದು ವಿಮಾನಗೋಪುರದವೆರೆಗೂ ಶುಚಿಗೊಳಿಸಿ, ಏನಾದರು ಲೋಪವಿದ್ದರೆ ಅದನ್ನು ನವೀಕರಿಸಲಾಗುತ್ತದೆ.