

ನಾಳೆ ತುಳಸಿ ಹಬ್ಬ.. ಈ ಹಬ್ಬ ಹಿಂದೂ ಧರ್ಮದಲ್ಲಿ ಒಂದು ಪ್ರಮುಖ ಮತ್ತು ಪವಿತ್ರ ಹಬ್ಬವಾಗಿದ್ದು, ದೀಪಾವಳಿಯ ನಂತರ ಕಾರ್ತಿಕ ಮಾಸದಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ತುಳಸಿ ಗಿಡಕ್ಕೆ ವಿಶೇಷ ಪೂಜೆ ನಡೆಸಲಾಗುತ್ತದೆ.
ಹೌದು.. ಪ್ರತಿಯೊಂದು ಹಿಂದೂ ಮನೆಗಳಲ್ಲಿ ಅಂಗಳದಲ್ಲಿ ತುಳಸಿ ಗಿಡ ಇದ್ದೇ ಇರುತ್ತದೆ. ಮುಂಜಾನೆ ಎದ್ದು ತುಳಸಿ ಗಿಡಕ್ಕೆ ಪೂಜೆ ಮಾಡಿದ ನಂತರ ದಿನವನ್ನು ಆರಂಭಿಸುವ ವಾಡಿಕೆ. ಅದರಂತೆ ತುಳಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ.
ಹಿಂದೂ ಧರ್ಮದಲ್ಲಿ, ತುಳಸಿ ವಿವಾಹವು ವಿಶೇಷ ಪವಿತ್ರ ಮಹತ್ವವನ್ನು ಹೊಂದಿದೆ. ಈ ಶುಭ ದಿನದಂದು ಭಗವಾನ್ ಶಾಲಿಗ್ರಾಮ (ವಿಷ್ಣುವಿನ ಅವತಾರ) ಮತ್ತು ತುಳಸಿಯಾಗಿ ವೃಂದಾ ದೇವಿಯ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
ಐತಿಹ್ಯ
ತುಳಸಿಯನ್ನು ಲಕ್ಷ್ಮಿ ದೇವಿಯ ಅವತಾರವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿಯ ದೇವತೆ. ಮನೆಯಲ್ಲಿ ತುಳಸಿ ಗಿಡವನ್ನು ಬೆಳೆಸುವುದರಿಂದ ಮನೆಗೆ ಸಕಾರಾತ್ಮಕ ಶಕ್ತಿ ಬರುತ್ತದೆ. ನಕಾರಾತ್ಮಕ ಶಕ್ತಿ ನಾಶವಾಗುತ್ತದೆ.
ಶಾಲಿಗ್ರಾಮ ಶಿಲೆಯನ್ನು ವಿಷ್ಣುವಿನ ರೂಪವೆಂದು ಪರಿಗಣಿಸಲಾಗುತ್ತದೆ. ವಿಷ್ಣು ಎಲ್ಲಾ ದೇವರುಗಳ ಪರಮ ದೇವರು. ಹೀಗಾಗಿ ತುಳಸಿ ವಿವಾಹದ ದಿನದಂದು ಇಬ್ಬರನ್ನೂ ಪೂಜಿಸುವುದರಿಂದ ಶಾಶ್ವತ ಪುಣ್ಯ ಬರುತ್ತದೆ ಎಂಬ ನಂಬಿಕೆಯಿದೆ.
ಹಬ್ಬ ಯಾವಾಗ?
ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ವರ್ಷ ಕಾರ್ತಿಕ ಮಾಸದ ದ್ವಾದಶಿ ತಿಥಿಯು ನವೆಂಬರ್ 02ರ ಭಾನುವಾರ ಅಂದರೆ ನಾಳೆ ಹಬ್ಬವನ್ನು ಆಚರಿಸಲಾಗುತ್ತಿದೆ.
ಶುಭ ಮುಹೂರ್ತ
ತುಳಸಿ ಹಬ್ಬದ ದಿನ ಬೆಳಗಿನ ಜಾವ 5 ಗಂಟೆಯಿಂದ 5.48ರ ನಡುವೆ ಪೂಜೆ ಸಲ್ಲಿಸಲು ಪ್ರಸಕ್ತ ಸಮಯವಾಗಿದೆ. ಇದಲ್ಲದೇ ಸಂಜೆ 6.40 ರಿಂದ 8.40ರ ನಡುವಿನ ವೃಷಭ ಲಗ್ನದಲ್ಲಿಯೂ ಪೂಜೆ ಸಲ್ಲಿಸಬಹುದು.
ವಿಧಿ
ತುಳಸಿ ಹಬ್ಬದ ದಿನದಂದು, ಪೂಜೆಗೆ ಮೊದಲು ತುಳಸಿ ಕಟ್ಟೆಯನ್ನು ಸ್ವಚ್ಛಗೊಳಿಸಿ. ಬಳಿಕ ಅರಿಶಿನ, ಕುಂಕುಮ ಮತ್ತು ಶ್ರೀಗಂಧದಿಂದ ಅಲಂಕರಿಸಿ. ಸಾಲಿಗ್ರಾಮ ಕಲ್ಲನ್ನು ಗಂಗಾ ಜಲದಿಂದ ತೊಳೆದು ಸ್ವಚ್ಛಗೊಳಿಸಿ ಮತ್ತು ತುಳಸಿ ಎಲೆಗಳಿಂದ ಅಲಂಕರಿಸಿ. ಬಳಿಕ ತುಳಸಿ ಕಟ್ಟೆಯ ಸುತ್ತ ಸಣ್ಣ ಮಂಟಪವನ್ನು ಸಿದ್ಧಪಡಿಸಿ. ಮಂಟಪವನ್ನು ಹೂವುಗಳಿಂದ ಅಲಂಕರಿಸಬೇಕು.
ದೀಪಗಳನ್ನು ಇಡಬೇಕು. ದೀಪಕ್ಕೆ ತಾಮ್ರ, ಹಿತ್ತಾಳೆ ಅಥವಾ ಇದಾವುದೂ ಇಲ್ಲವೆಂದಲ್ಲಿ ಅಡಿಕೆ ತಟ್ಟೆಗಳನ್ನು ಇಡಬೇಕು. ಪೂಜೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಅಂದರೆ ದೀಪ, ಧೂಪದ್ರವ್ಯ, ಅಕ್ಕಿ, ಹೂವುಗಳು, ಹಣ್ಣುಗಳು ಇತ್ಯಾದಿಗಳನ್ನು ಸಂಗ್ರಹಿಸಿ. ಪೂಜೆಯ ಸಮಯದಲ್ಲಿ ಮಂತ್ರಗಳನ್ನು ಪಠಿಸಬೇಕು. ಈ ದಿನ ಬಡವರಿಗೆ ಆಹಾರ ಅಥವಾ ಬಟ್ಟೆಗಳನ್ನು ದಾನ ಮಾಡುವುದು ಸಹ ಶುಭವನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಪೂಜಾ ಸಾಮಗ್ರಿಗಳಲ್ಲಿ ಇವು ಮುಖ್ಯ
ಸಾಮಾನ್ಯವಾಗಿ ತುಳಸಿಗಿಡ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆ ಇಡುತ್ತಾರೆ. ಈ ಬೆಟ್ಟದ ನೆಲ್ಲಿಕಾಯಿ ಕೊಂಬೆಯಲ್ಲಿ ವಿಷ್ಣುವಿನ ಸಾನಿಧ್ಯವಿದೆ ಎಂದು ನಂಬಲಾಗಿದೆ. ಹೀಗಾಗಿ ತುಳಸಿ ಗಿಡದ ಪಕ್ಕದಲ್ಲಿ ಈ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆ ಇಟ್ಟು ಪೂಜೆ ಮಾಡಲಾಗುತ್ತದೆ.
ಇದಲ್ಲದೆ ಅರಿಶಿಣ ಕೊಂಬು, ಮೊಸರು ಮತ್ತು ಹೆಸರುಕಾಳುಗಳನ್ನು ಇಟ್ಟು ಪೂಜಿಸಬೇಕು. ನೈವೇದ್ಯಕ್ಕಾಗಿ ಹೆಸರುಬೇಳೆ ಕೋಸಂಬರಿ ಮತ್ತು ಬೆಲ್ಲ ಪಾನಕವನ್ನು ಇಡಲಾಗುತ್ತದೆ. ಹೆಸರುಬೇಳೆ ಕೋಸಂಬರಿಗೆ ಉಪ್ಪು ಹಾಕಬಾರದು. ಪೂಜೆಯ ನಂತರ ಬೇಕಿದ್ದಲ್ಲಿ ಉಪ್ಪು ಸೇರಿಸಿ ಸೇವಿಸಬಹುದು.
Advertisement