ಭವಿಷ್ಯ ಭಾರತದ ನಕಾಶೆ ರೆಡಿ! ಗಡಿಯಲ್ಲೋ, ರೇಖೆಯಲ್ಲೋ ಬದಲಾಗುವ ಮ್ಯಾಪ್ ಅಲ್ಲ ಇದು. ಸಮೃದ್ಧ ಭಾರತ ಹೇಗಿರಬೇಕು ಎಂಬುದು 2022ರ ಅಮೃತ ಮಹೋತ್ಸವದ ವೇಳೆ ಗೊತ್ತಾಗಲಿದೆ ಎಂಬುದು ಮೋದಿಯ ಆಶಾವಾದ. ಇದಕ್ಕಾಗಿ ಮೋದಿ ಹೆಣೆದ ಯೋಜನೆಗಳೇನು? ಆ ಬ್ಲ್ಯೂಪ್ರಿಂಟಿನ ಸ್ವರೂಪ ಹೇಗಿದೆ ಎಂಬುದನ್ನು ಈ ಮಾತುಗಳಲ್ಲೇ ಕಾಣಬಹುದು.
ಆಗ ಪ್ರತಿ ಕುಟುಂಬಕ್ಕೂ ಸೂರು. ನಗರ ಪ್ರದೇಶಗಳಲ್ಲಿ ಏನಿಲ್ಲವೆಂದರೂ 2 ಕೋಟಿ ಹಾಗೂ ಗ್ರಾಮೀಣ ಭಾಗಗಳಲ್ಲಿ 4 ಕೋಟಿ ಮನೆಗಳ ನಿರ್ಮಾಣ.
-ಪ್ರತಿ ಮನೆಗೂ 24 ಗಂಟೆ ಕರೆಂಟು, ಸ್ವಚ್ಛ ಕುಡಿಯುವ ನೀರು, ಶೌಚಾಲಯ ಮತ್ತು ರಸ್ತೆ ಸಂಪರ್ಕ.
-ಕಡೇಪಕ್ಷ ಮನೆಯ ಒಬ್ಬ ಸದಸ್ಯರಿಗಾದರೂ ಕುಟುಂಬ ನಿರ್ವಹಣೆಗೆ ಉದ್ಯೋಗ ಅಥವಾ ಆರ್ಥಿಕ ಅವಕಾಶಗಳಿರಬೇಕು.
-ಬಡವರನ್ನು ದೃಷ್ಟಿಯಲ್ಲಿಟ್ಟುಕೊಂಡೇ ಎಲ್ಲ ಯೋಜನೆಗಳು. ಬಡತನ ನಿರ್ಮೂಲನೆಯ ಪ್ರಯತ್ನದಲ್ಲಿ ಪ್ರತಿಯೊಬ್ಬ ಭಾರತೀಯನೂ ಪಾಲುದಾರ.
-ಈಗ ವಿದ್ಯುತ್ ಸಂಪರ್ಕದಿಂದ ವಂಚಿತವಾಗಿರುವ 20,000 ಹಳ್ಳಿಗಳು 2022ರ ವೇಳೆಗೆ ಸಂಪೂರ್ಣ ಬೆಳಗಿರುತ್ತವೆ. ಜಲವಿದ್ಯುತ್ ಸಾಕಾಗಿದ್ದರೆ, ಸೌರಶಕ್ತಿಯಿಂದಲೇ ಈ ಗುರಿ ತಲುಪಬಹುದು.
-ಈಗ 1,78,000 ವಾಸಸ್ಥಳಗಳಿಗೆ ರಸ್ತೆ ಸಂಪರ್ಕವೇ ಇಲ್ಲ. 2022ರ ವೇಳೆಗೆ ಇವೆಲ್ಲ ಪಕ್ಕಾ ರಸ್ತೆಗಳ ಮೂಲಕ ಕನೆಕ್ಟ್ ಆಗಿರುತ್ತವೆ. ನಿರ್ಮಾಣ ಹಂತದಲ್ಲಿರುವ 1 ಲಕ್ಷ ಕಿ.ಮೀ. ರಸ್ತೆ ಮಾರ್ಗವನ್ನು ಪೂರ್ಣಗೊಳಿಸುವ ಮತ್ತು ಹೆಚ್ಚುವರಿ 1 ಲಕ್ಷ ಕಿ.ಮೀ. ವಿಸ್ತೀರ್ಣದ ರಸ್ತೆಯನ್ನು ನಿರ್ಮಿಸುವ ಯೋಜನೆಗೆ ಈಗಿನಿಂದಲೇ ಚುರುಕು.
-ಉತ್ತಮ ಆರೋಗ್ಯ ಪ್ರತಿಯೊಬ್ಬನ ಹಕ್ಕು. ಆಗ ಪ್ರತಿ ಹಳ್ಳಿಯಲ್ಲೂ ಡಾಕ್ಟರ್ ಇರುತ್ತಾರೆ. ಹಳ್ಳಿಮನೆಗಳ ಪಕ್ಕದಲ್ಲೇ ಆಸ್ಪತ್ರೆಭಾಗ್ಯ.
-ಆಗ ಪ್ರತಿ 5 ಕಿ.ಮೀ. ವ್ಯಾಪ್ತಿಯಲ್ಲಿ ಪ್ರೌಢಶಾಲೆ. 80,000 ಪ್ರೌಢಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮತ್ತು 75,000 ಜೂನಿಯರ್/ ಮಿಡಲ್ ಶಾಲೆಗಳನ್ನು ಪ್ರೌಢಶಾಲೆಗಳ ಮಟ್ಟಕ್ಕೆ ಏರಿಸುವ ಅಥವಾ ಸೇರಿಸುವ ಅಗತ್ಯವಿದೆ. ಕಲಿಕೆ ಮತ್ತು ಗುಣಮಟ್ಟದ ವಿಷಯದಲ್ಲಿ ಶಿಕ್ಷಣ ವಲಯ ಉತ್ತಮಗೊಳ್ಳುವುದನ್ನು ನಾವು ಖಾತ್ರಿಪಡಿಸಬೇಕು.
-ಗ್ರಾಮಗಳ ಉದಾಟಛಿರಕ್ಕಾಗಿ ಕೃಷಿ ಉತ್ಪಾದನೆಯ ಹೆಚ್ಚಳ. ಬೆಳೆಗೆ ನ್ಯಾಯಯುತ ಬೆಲೆ ಪಕ್ಕಾ. ನೀರಾವರಿ ಪ್ರದೇಶಗಳ ಸಂಖ್ಯೆಯನ್ನು ಹೆಚ್ಚಿಸುವುದು, ಅಸ್ತಿತ್ವದಲ್ಲಿರುವ ನೀರಾವರಿ ವ್ಯವಸ್ಥೆಗಳನ್ನು ಸುಧಾರಣೆ, ಕೃಷಿ ಆಧರಿತ ಉದ್ಯಮಗಳಿಗೆ ಉತ್ತೇಜನ ನೀಡುವುದು ಮತ್ತು ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ದೊರೆಯುವಂತೆ ಮಾಡುವ ಗುರಿ.
- `ನಗರ ಮತ್ತು ಗ್ರಾಮೀಣ' ಎನ್ನುವ ವಿಭಜನೆ ಆಗ ಇಲ್ಲವೇ ಇಲ್ಲ.
-ನಮ್ಮ ಜನಸಂಖ್ಯೆಯಲ್ಲಿ 35 ವರ್ಷಗಳಿಗಿಂತಲೂ ಕಡಿಮೆ ವಯೋಮಾನದವರು 3ನೇ 2ರಷ್ಟಿದ್ದಾರೆ. ಈ ಕಾರಣಕ್ಕೇ ನಮ್ಮ ಯುವ ಜನತೆಗೆ ಸೂಕ್ತ ಉದ್ಯೋಗ ದೊರಕುವಂತಾಗಬೇಕು. ಹೀಗಾಗಲು ಭಾರತವನ್ನು ಜಗತ್ತಿನ ಉತ್ಪಾದನಾ ಕೇಂದ್ರವನ್ನಾಗಿಸಲೇಬೇಕು. `ಸ್ಕಿಲ್ ಇಂಡಿಯಾ' ಮತ್ತು `ಮೇಕ್ ಇನ್ ಇಂಡಿಯಾ ಕಾರ್ಯಕ್ರಮಗಳು ಈ ಗುರಿಯೊಂದಿಗೆ ಮುನ್ನಡೆಯುತ್ತಿವೆ.
-ಭಾರತದಲ್ಲಿ ಉದ್ಯಮಶೀಲ ಮನಸ್ಸುಗಳನ್ನು ಬೆಳೆಸುವ ಮತ್ತು ಹೊಸ ಉದ್ಯಮಗಳನ್ನು ಬೆಂಬಲಿಸುವ ಅಗತ್ಯವಿದೆ. ಆಗ ಮಾತ್ರ ನಮ್ಮ ಯುವಕರು ಉದ್ಯೋಗಾಕಾಂಕ್ಷಿಗಳಿಂದ ಉದ್ಯೋಗದಾತರಾಗಿ ಬದಲಾಗಬಲ್ಲರು.
-ಅಭಿವೃದ್ಧಿಯ ವಿಷಯದಲ್ಲಿ ದೇಶದ ಪೂರ್ವ ಮತ್ತು ಈಶಾನ್ಯ ಪ್ರದೇಶಗಳು ಅನೇಕ ವಲಯಗಳಲ್ಲಿ ಹಿಂದುಳಿದಿವೆ. ಇಡೀ ದೇಶದೊಂದಿಗೆ ಅವು ಹೆಜ್ಜೆಹಾಕುವಂತಾಗಬೇಕು.
-ಭಾರತ ಪ್ರವರ್ಧಮಾನಕ್ಕೆ ಬರಬೇಕೆಂದರೆ, ಜವಾಬ್ದಾರಿಯುತ ಜಾಗತಿಕ ಶಕ್ತಿಯಾಗಿ ಬೆಳೆಯಬೇಕೆಂದರೆ, 2022ರ `ಅಮೃತ ಮಹೋತ್ಸವ'ದ ವೇಳೆಗೆ, ನಾವು ಈ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ಸಾಧಿಸಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನಮ್ಮ ನಿಜವಾದ ಮತ್ತು ಅರ್ಥಪೂರ್ಣ ಗೌರವ ಇದಾಗಿರಲಿದೆ.
Advertisement