ರಾಜ್ಯ ಬಜೆಟ್ 2020-2021: ಆರ್ಥಿಕ ಸಂಕಷ್ಟದ ನಡುವೆಯೂ ಕೃಷಿ, ಬಂಡವಾಳ ಹೂಡಿಕೆ, ಮೂಲಭೂತ ಸೌಕರ್ಯಕ್ಕೆ ಆದ್ಯತೆ
ಬೆಂಗಳೂರು: 2020-21ನೇ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಗುರುವಾರ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಸಕ್ತ ಸಾಲಿನ ಆಯವ್ಯಯವನ್ನು ಮಂಡನೆ ಮಾಡಲಿದ್ದಾರೆ. ಈ ಬಾರಿಯ ಬಜೆಟ್ ನಲ್ಲಿ ಕೃಷಿ, ಬಂಡವಾಳ ಹೂಡಿಕೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.
ಬಜೆಟ್ ಮಂಡನೆ ಮಾಡಿದರೂ ಕಠಿಣ, ಮಾಡದೇ ಹೋದರೂ ಮತ್ತಷ್ಟು ಕಠಿಣ ಎಂದು ಆರ್ಥಿಕ ಹಿಂಜರಿತದಿಂದ ಉಂಟಾಗಿರುವ ಆದಾಯ ಕೊರತೆ ಮಧ್ಯೆಯೇ ಸಂಪನ್ಮೂಲ ಕ್ರೋಡೀಕರಣದ ಸವಾಲು ಎದುರಿಸುತ್ತಿರುವ ಯಡಿಯೂರಪ್ಪ ಅವರು ತೆರಿಗೆ ಹೇರಿಕೆ ಕುರಿತಂತೆ ಹೇಳಿಕೆ ನೀಡಿದ್ದಾರೆ.
ಮೈತ್ರಿ ಸರ್ಕಾರದ ಅಂತ್ಯಗೊಂಡ ಬಳಿಕ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಯಾವ ಯಾವ ಹೊಸ ಯೋಜನೆಗಳನ್ನು ಘೋಷಣೆ ಮಾಡಬಹುದು, ಬೆಂಗಳೂರು ನಗರಕ್ಕೆ ಯಾವೆಲ್ಲಾ ಹೊಸ ಯೋಜನೆಗಳು ಘೋಷಣೆಯಾಗಬಹುದು ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮೂಡತೊಡಗಿದೆ.
ಈ ಬಾರಿಯ ಬಜೆಟ್ ಕೃಷಿ, ಮೂಲಭೂತ ಸೌಕರ್ಯ ಹಾಗೂ ಬಂಡವಾಳ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇವುಗಳಿಗೆ ಪ್ರತ್ಯೇಕ ಬಜೆಟ್ ಮಂಡನೆ ಮಾಡಲಾಗುತ್ತಿಲ್ಲ ಎಂದೂ ಹೇಳಲಾಗುತ್ತಿದೆ.
ಜಲಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ಮುಡಿಪಾಗಿಡಲು ಮುಖ್ಯಮಂತ್ರಿಗಳು ಉದ್ದೇಶಿಸಿದ್ದಾರೆ. ಅಲ್ಲದೆ,, ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ರೂ.4000ಗಳಿಂದ ಹೆಚ್ಚಿಸುವ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯ ಘೋಷಣೆಗೆ ನಿರ್ದಿಷ್ಟ ಹಂಚಿಕೆಯನ್ನು ನಿರೀಕ್ಷಿಸಲಾಗುತ್ತಿದೆ.
ಇನ್ನು ಭಾರೀ ಮಳೆಯಿಂದಾಗಿ 22 ಜಿಲ್ಲಗಳು ಪರಿಹಾರಕ್ಕಾಗಿ ಕಾದು ಕುಳಿತಿದ್ದು, ಬಜೆಟ್ ನಲ್ಲಿ ಈ ಜಿಲ್ಲೆಗಳಿಗೇನಾದರೂ ಹೊಸ ಘೋಷಣೆಗಳಿವೆಯೇ ಎಂಬುದೂ ಎಲ್ಲರ ಗಮನವನ್ನು ಸೆಳೆದಿದೆ. ಪ್ರವಾಹ ಪೀಡಿತ ಗ್ರಾಮಗಳಿಗೆ ಪುನರ್ವಸತಿಗೆ ಸಾಕಷ್ಟು ಪ್ಯಾಕೇಜ್ ಘೋಷಣೆಗಳನ್ನು ನಿರೀಕ್ಷಲಾಗುತ್ತಿದೆ. ನಗರದ ಅಭಿವೃದ್ಧಿ ಮಾತ್ರವಲ್ಲದೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಆರೋಗ್ಯ, ಶಿಕ್ಷಣ, ಐಟಿ-ಬಿಟಿ ಸಚಿವಾಲಯಗಳಲ್ಲಿಯೂ ಮೂಲಸೌಕರ್ಯಗಳ ಉತ್ತೇಜನಗಳ ನಿರೀಕ್ಷೆಗಲಿವೆ. ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಯಡಿಯೂರಪ್ಪ ಅವರು ಭಾಗವಹಿಸಿದ ಬಳಿಕ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಮನರಂಜನೆ, ಪೆಟ್ರೋಲಿಯಂ ವಸ್ತುಗಳ ಮೇಲಿನ ತೆರಿಗೆ ಈ ಬಾರಿ ಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ