ಮಲ್ಯ ಉದ್ದೇಶ ಪೂರ್ವಕ ಸುಸ್ತಿದಾರ: ಎಸ್ ಬಿಐ ಶಾಕ್
ಮುಂಬಯಿ: ವಿಜಯ್ ಮಲ್ಯ ಮತ್ತು ಯುನೈಟೆಡ್ ಬ್ರೂವರೀಸ್ ಹೋಲ್ಡಿಂಗ್ಸ್ ಸಂಸ್ಥೆಯನ್ನು ಉದ್ದೇಶಪೂರ್ವಕ ಸುಸ್ತಿದಾರ ಎಂದು ಎಸ್ ಬಿ ಐ ಘೋಷಿಸಿದೆ. ಮಲ್ಯ ಒಡೆತನದ ಕಿಂಗ್ಫಿಷರ್ ಏರ್ಲೈನ್ಸ್ ಹಣದ ಕೊರತೆಯಿಂದ ಕುಂಟುತ್ತಿದ್ದ ಕಾಲದಲ್ಲಿ ಅತಿ ಹೆಚ್ಚು ಸಾಲ ನೀಡಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಕಿಂಗ್ಫಿಶರ್ ಸಂಸ್ಥೆ ವಿರುದ್ಧ ತಿರುಗಿ ಬಿದ್ದಿದೆ.
ಸಾಲದಾರ ತಮ್ಮ ಕಾನೂನು ಪ್ರತಿನಿಧಿ ಮೂಲಕ ಮಾಡಿದ ವಾದಗಳನ್ನು ತಿರಸ್ಕರಿಸಿದ ಕುಂದುಕೊರತೆ ಪರಿಶೀಲನಾ ಸಮಿತಿ, ಮಲ್ಯ ಹಾಗೂ ಅವರ ಸಂಸ್ಥೆಗಳು ಉದ್ದೇಶಪೂರ್ವಕ ಸುಸ್ತಿದಾರ ಎಂದು ಪ್ರಕಟಿಸಿದೆ. ಮಲ್ಯ ಮತ್ತು ಕಿಂಗ್ಫಿಶರ್ ಏರ್ಲೈನ್ಸ್ ವಿರುದ್ಧ ಹಣಕಾಸು ವಂಚನೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನಿಖೆ ಪ್ರಾರಂಭಿಸಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿರುವುದು ವಿಜಯ್ ಮಲ್ಯ ಅವರಿಗೆ ದೊಡ್ಡ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಈ ನಡುವೆ ಹಣಕಾಸು ವಂಚನೆ ಕಾಯಿದೆಯಡಿ ಮಲ್ಯ ಹಾಗೂ ವಿಮಾನಯಾನ ಸಂಸ್ಥೆ ವಿರುದ್ಧ ಸಿಬಿಐ ಸಲ್ಲಿಸಿರುವ ಎಫ್ಐಆರ್ ಪ್ರತಿಯನ್ನು ಕುಂದುಕೊರತೆ ಪರಿಶೀಲನಾ ಸಮಿತಿ ಕೇಳಿದೆ. ಕಿಂಗ್ಫಿಷರ್ ಏರ್ಲೈನ್ಸ್ ಪುನರುತ್ಥಾನಕ್ಕೆಂದು ರಾಷ್ಟ್ರೀಕೃತ ಬ್ಯಾಂಕುಗಳು ನೀಡಿದ್ದ 4 ಸಾವಿರ ರೂ. ಮೊತ್ತದ ಸಾಲವನ್ನು ಅವರು ಉದ್ದೇಶಕ್ಕೆ ಬಳಸಿಕೊಳ್ಳದೆ ತೆರಿಗೆ ಕಳ್ಳರ ಸ್ವರ್ಗವಾದ ಕೇಮನ್ ದ್ವೀಪ ಮತ್ತು ಮಾರಿಷಸ್ಗೆ ಸಾಗಿಸಿ ಬೇರೆಡೆಗೆ ತಿರುಗಿಸಿದ ಆರೋಪದ ಬಗ್ಗೆ ಸಿಬಿಐ ಈಗಾಗಲೇ ದೂರು ದಾಖಲಿಸಿ ತನಿಖೆ ನಡೆಸುತ್ತಿದೆ.
.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ