ಬೆಂಗಳೂರು: ಕಾರ್ಮಿಕರ ಭವಿಷ್ಯ ನಿಧಿ ಮೇಲಿನ ಬಡ್ಡಿದರವನ್ನು 8.65ಕ್ಕೆ ಇಳಿಕೆ ಮಾಡಿದ್ದು, 2015-2016ಕ್ಕೆ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬಡ್ಡಿ ದರಲ್ಲಿ ಶೇ.0.15ರಷ್ಟು ಇಳಿಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಕಾರ್ಮಿಕರ ಭವಿಷ್ಯನಿಧಿ ಸಂಘಟನೆ 215ನೇ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದ್ದು, ನೂತನ ಬಡ್ಡಿದರಗಳು ಜನವರಿ 1 2017 ರಿಂದ ಜಾರಿಗೆ ಬರಲಿವೆ ಎಂದು ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೆಯ ಅವರು ತಿಳಿಸಿದರು. ಸರ್ಕಾರದ ನಿರ್ಧಾರ ಸುಮಾರು 4 ಕೋಟಿ ನೌಕರರ ಮೇಲೆ ಪರಿಣಾಮ ಬೀರಲಿದ್ದು, ಪ್ರಮುಖವಾಗಿ ಬಡ್ಡಿದರ ಇಳಿಕೆಗೆ ಕೇಂದ್ರ ಸರ್ಕಾರದ ನೋಟು ನಿಷೇಧವೇ ಕಾರಣ ಎಂದು ಹೇಳಲಾಗುತ್ತಿದೆ. ಕೇಂದ್ರ ಸರ್ಕಾರದ ನೋಟು ನಿಷೇಧದ ಬಳಿಕ ಎಲ್ಲ ಬ್ಯಾಂಕುಗಳು ತಮ್ಮ ತಮ್ಮ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದ್ದವು.
ಇದೇ ಕಾರಣಕ್ಕೆ ಕಾರ್ಮಿಕ ಇಲಾಖೆ ಕೂಡ ಪಿಎಫ್ ಬಡ್ಡಿದರವನ್ನು ಇಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಕಾರ್ಮಿಕ ಇಲಾಖೆಯ ನಿರ್ಧಾರದಿಂದಾಗಿ ಸ್ಥಿರ ಠೇವಣಿಗಳ ಬಡ್ಡಿದರ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಕಾರ್ಮಿಕ ನಿಧಿ ಬಡ್ಡಿದರ ಇಳಿಕೆಯಿಂದಾಗಿ ಇಲಾಖೆ ಮೇಲಿದ್ದ 410 ಕೋಟಿ ಹೆಚ್ಚುವರಿ ಹೊರೆ ತಗ್ಗಲಿದೆ ಎಂದು ದತ್ತಾತ್ರೆಯ ಅವರು ಹೇಳಿದರು. ಮುಂದಿನ ಹಣಕಾಸು ವರ್ಷದಲ್ಲಿ ಶೇ.8.8ರಷ್ಟು ಬಡ್ಡಿದರವನ್ನು ಮುಂದುವರೆಸಿದ್ದರೆ ಖಜಾನೆಗೆ 383 ಕೋಟಿ ರೂಪಾಯಿ ಕೊರತೆಯುಂಟಾಗಬಹುದಿತ್ತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಏಪ್ರಿಲ್ ನಲ್ಲಿ ಸಣ್ಣ ಉಳಿತಾಯ ಯೋಜನೆಗಳಿಗೆ ಸರ್ಕಾರ ಹೊರಡಿಸಿರುವ ನಿಯಮಗಳ ಪ್ರಕಾರ, ಪಿಎಫ್ ಬಡ್ಡಿದರವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕೃತಗೊಳಿಸಲಾಗುತ್ತದೆ. ಈ ಹಿಂದೆ ವರ್ಷಕ್ಕೊಮ್ಮೆ ಬಡ್ಡಿದರ ಪರಿಷ್ಕರಣೆ ಮಾಡಲಾಗುತ್ತಿತ್ತು.
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹೂಡಿಕೆ ಮಾಡಿದವರಿಗೆ ಡಿಸೆಂಬರ್ ಅಂತ್ಯಕ್ಕೆ ಶೇಕಡಾ 8ರಷ್ಟು ಬಡ್ಡಿ ದೊರೆಯಲಿದ್ದು, 5 ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು 5 ವರ್ಷಗಳ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳ ಬಡ್ಡಿದರ ಶೇಕಡಾ 8.5ರಿಂದ ಶೇಕಡಾ 8ಕ್ಕೆ ಇಳಿಕೆ ಮಾಡಲಾಗಿದೆ. ಅದರಂತೆ 2 ವರ್ಷಗಳ ಅವಧಿಯ ಉಳಿತಾಯ ಯೋಜನೆ ಮೇಲಿನ ಬಡ್ಡಿದರವನ್ನು ಶೇ.7.20ಕ್ಕೆ, 3 ವರ್ಷಗಳ ಉಳಿತಾಯ ಯೋಜನೆ ಮೇಲಿನ ಬಡ್ಡಿದರವನ್ನು ಶೇ.7.40ಕ್ಕೆ ಮತ್ತು 5 ವರ್ಷಗಳ ಮೇಲಿನ ಉಳಿತಾಯ ಯೋಜನೆಯ ಬಡ್ಡಿದರವನ್ನು ಶೇ.7.90ಕ್ಕೆ ನಿಗದಿಪಡಿಸಲಾಗಿದೆ.
ಆಡಳಿತಾತ್ಮಕ ನಿರ್ವಹಣಾ ಶುಲ್ಕ ಇಳಿಕೆ
ಇದೇ ವೇಳೆ ಕಾರ್ಮಿಕ ಇಲಾಖೆ ತನ್ನ ಆಡಳಿತಾತ್ಮಕ ಶುಲ್ಕದಲ್ಲಿ ಇಳಿಕೆ ಮಾಡಿದ್ದು, ಶೇ.1.10ರಷ್ಟಿದ್ದ ಶುಲ್ಕವನ್ನು ಶೇ.0.65ಕ್ಕೆ ಇಳಿಕೆ ಮಾಡಲಾಗಿದೆ ಎಂದು ದತ್ತಾತ್ರೆಯ ಅವರು ತಿಳಿಸಿದರು.
Advertisement