ನವದೆಹಲಿ: ಕೇಂದ್ರ ಸರ್ಕಾರ ವಿಮಾನ ಪ್ರಯಾಣಿಕರಿಗೆ ಸಂತಸವಾಗುವಂತಹ ಕೆಲವೊಂದು ನಿರ್ಧಾರಗಳನ್ನು ಪ್ರಸ್ತಾಪಿಸಿದ್ದು, ಟಿಕೆಟ್ ರದ್ದತಿಗಾಗಿ ವಿಧಿಸಲಾಗುತ್ತಿದ್ದ ಶುಲ್ಕವನ್ನು ಕಡಿಮೆಗೊಳಿಸುವುದು, ಅಥವಾ ಬೋರ್ಡಿಂಗ್ ನಿರಾಕರಿಸಿದರೆ ಹೆಚ್ಚಿನ ಪರಿಹಾರ ನೀಡುವುದು ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು, ಸರಕು( ಬ್ಯಾಗೇಜ್) ಶುಲ್ಕ ಕಡಿಮೆಗೊಳಿಸುವುದು, ಟಿಕೆಟ್ ರದ್ದುಗೊಳಿಸಿದ ಪ್ರಯಾಣಿಕರಿಗೆ ವಿಧಿಸಲಾಗುವ ಶುಲ್ಕವನ್ನು ಕಡಿಮೆಗೊಳಿಸಿ 15 ದಿನಗಳಲ್ಲಿ ಹಣ ವಾಪಸ್ ಪಾವತಿ ಮಾಡುವುದು( ಏಜೆಂಟ್ ಪೋರ್ಟಲ್ ಸೇರಿದಂತೆ ಯಾವುದೇ ಮೂಲಕ ಟಿಕೆಟ್ ಕಾಯ್ದಿಸಿದ್ದರೂ ಅದಕ್ಕೆ ಅನ್ವಯ) ಸೇರಿದಂತೆ ಹಲವು ಪ್ರಯಾಣಿಕ ಸ್ನೇಹಿ ಕ್ರಮಗಳನ್ನು ಜಾರಿಗೆ ತರುವುದಾಗಿ ತಿಳಿಸಿದೆ.
ಯಾವುದೇ ಸಂದರ್ಭಗಳಲ್ಲೂ ಟಿಕೆಟ್ ರದ್ದತಿಗೆ ವಿಧಿಸಲಾಗುವ ಶುಲ್ಕ ಪ್ರಾಥಮಿಕ ಶುಲ್ಕಕ್ಕಿಂತಲೂ ಹೆಚ್ಚಿರಬಾರದು, ಒಂದು ವೇಳೆ ವಿಮಾಗಳು ಟೇಕ್ ಆಫ್ ಗೆ ನಿಗದಿಯಾಗಿದ್ದ ವೇಳಾಪಟ್ಟಿಗಿಂತ 24 ಗಂಟೆಗಳ ಮುಂಚೆ ರದ್ದಾದರೆ ಶಾಸನಬದ್ಧ ತೆರಿಗೆ ಸಮೇತ ನೀಡಲಾಗುವ ಪರಿಗಾರ ಮೊತ್ತವನ್ನು 10 ಸಾವಿರ ರೂಗೆ ಏರಿಕೆ ಮಾಡುವುದು ಸೇರಿದಂತೆ ಶೀಘ್ರವೇ ನಾಗರಿಕ ವಿಮಾನಯಾನ ಇಲಾಖೆ ಪ್ರಸ್ತಾಪಿಸಿರುವ ಕ್ರಮಗಳು ಜಾರಿಗೊಳ್ಳಲಿವೆ. ಇನ್ನು ಹೆಚ್ಚಿನ ಸರಕನ್ನು ತೆಗೆದುಕೊಂಡು ಹೋಗುವ ಪ್ರಯಾಣಿಕರಿಗೆ ಈಗಿರುವ 15 ಕೆಜಿ ಮಿತಿಯೊಂದಿಗೆ 5 ಕೆಜಿಗಳ ಹೆಚ್ಚುವರಿ ಸರಕುಗಳಿಗೆ ಪ್ರತಿ ಕೆಜಿಗೆ 100 ರೂ ಹೆಚ್ಚಿನ ಶುಲ್ಕ ವಿಧಿಸಬೇಕೆಂಬ ನಿಯಮ ಜಾರಿಗೆ ಬರಲಿದೆ ಎಂದು ಅಶೋಕ್ ಗಜಪತಿಬಾಬು ತಿಳಿಸಿದ್ದಾರೆ.
ಈಗಿನ ನಿಯಮಗಳ ಪ್ರಕಾರ 15 ಕೆಜಿ ಮಿತಿ ದಾಟಿದರೆ 20 ಕೆಜಿ ಗಳ ವರೆಗೆ ಪ್ರತಿ ಕೆಜಿಗೆ 300 ರೂ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತಿದೆ.ಈಗಿನ ನಿಯಮಗಳನ್ನು ಬದಲಾವಣೆ ಮಾಡುತ್ತಿರುವುದರಿಂದ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ವಿಕಲಾಂಗರಿಗೂ ಉತ್ತಮ ಸೌಲಭ್ಯ ಸಿಗುವ ನಿರೀಕ್ಷೆ ಇದೆ.
Advertisement