ಬೆಂಗಳೂರು: ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ವಿವಿಧ ಗೋದಾಮುಗಳಲ್ಲಿ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು ಒಂದು ಸಾವಿರ ಕಾರ್ಮಿಕರಿಗೂ ಭವಿಷ್ಯ ನಿಧಿ(ಪಿಎಫ್) ವಿಸ್ತರಿಸಲಾಗಿದ್ದು, ಇದರಿಂದ ಹಿಂದಿನ 10 ವರ್ಷದ ಪಿಎಫ್ ಕಾರ್ಮಿಕರಿಗೆ ತಲುಪುವಂತಾಗಿದೆ.
ಈ ಸಂಬಂಧ ಬೆಂಗಳೂರು ವಲಯ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತ ಮನೀಷ್ ಅಗ್ನಿಹೋತ್ರಿ ಅವರು ಆಹಾರ ಮತ್ತು ನಾಗರಿಕ ಸರಬರಾಜು ನಿಗಮ 26.74 ಕೋಟಿ ರುಪಾಯಿ ಬಾಕಿ ಹಣವನ್ನು ಪಾವತಿಸಬೇಕು ಎಂದು ಆದೇಶಿಸಿದ್ದಾರೆ.
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ಒಂದು ಸಾವಿರ ಕಾರ್ಮಿಕರು 2004ರ ನಂತರ ಭವಿಷ್ಯ ನಿಧಿ ಮತ್ತು ಪಿಂಚಣಿ ಸೌಲಭ್ಯದಿಂದ ಪಡೆಯುತ್ತಿಲ್ಲ. ಈ ವಿಷಯವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಲೋಡಿಂಗ್ ಮತ್ತು ಅನಲೋಡಿಂಗ್ ಕಾರ್ಮಿಕರ ಒಕ್ಕೂಟ ಭವಿಷ್ಯ ನಿಧಿ ಸಂಘಟನೆಯ ಗಮಕ್ಕೆ ತಂದಿತ್ತು.
ವಿವರವಾದ ವಿಚಾರಣೆಯ ನಂತರ ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರು ಗೋದಾಮು ಕಾರ್ಮಿಕರಿಗೂ ಪಿಎಫ್ ಸೌಲಭ್ಯವನ್ನು ವಿಸ್ತರಿಸಿದ್ದಾರೆ.