ಹೊಸದಿಲ್ಲಿ: ವಿವಿದ ಬೇಡಿಕೆಗಳಿಗೆ ಒತ್ತಾಯಿಸಿ ಸರ್ಕಾರಿ ಬ್ಯಾಂಕ್ಗಳ ನೌಕರರು ಮಂಗಳವಾರ ಒಂದು ದಿನದ ಮುಷ್ಕರ ನಡೆಸಲಿದ್ದಾರೆ, ಇದರಿಂದ ನಾಳೆ ಬ್ಯಾಂಕಿಂಗ್ ವಹಿವಾಟಿಗೆ ತೊಂದರೆಯಾಗುವ ನಿರೀಕ್ಷೆ ಇದೆ.
ಬ್ಯಾಂಕ್ ನೌಕರರ ಸಂಘಟನೆಗಳು ಯುಎಫ್ ಬಿಯು ಸಂಘಟನೆಯ ಆಸರೆಯಲ್ಲಿ ನಾಳೆ ಮುಷ್ಕರ ಹಮ್ಮಿಕೊಳ್ಳಲಾಗಿದೆ.
ಬಹುತೇಕ ಬ್ಯಾಂಕುಗಳು ಇದಾಗಲೇ ತಮ್ಮ ಗ್ರಾಹಕರಿಗೆ ಈ ಮುಷ್ಕರದ ಕುರಿತಂತೆ ಮಾಹಿತಿ ಒದಗಿಸಿದೆ.
ಆದರೆ ಖಾಸಗಿ ಬ್ಯಾಂಕ್ಗಳಾಗಿರುವ ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ಗಳಲ್ಲಿನ, ಸಾಮಾನ್ಯ ಚೆಕ್ ವಟಾವಣೆಯಲ್ಲಿನ ವಿಳಂಬವನ್ನು ಹೊರತು ಪಡಿಸಿದರೆ, ಗ್ರಾಹಕ ಸೇವೆಯಲ್ಲಿ ಯಾವುದೆ ಅಡಚಣೆ ಇರುವುದಿಲ್ಲ.
‘ಮುಖ್ಯ ಕಾರ್ಮಿಕ ಆಯುಕ್ತರ ಸಮ್ಮುಖದಲ್ಲಿ ನಡೆದ ಮಾತುಕತೆ ವಿಫಲವಾಗಿರುವುದರಿಂದ ಮುಷ್ಕರ ನಡೆಸುವುದು ಅನಿವಾರ್ಯವಾಗಿದೆ’ ಎಂದು ‘ಎಐಬಿಒಸಿ’ ಪ್ರಧಾನ ಕಾರ್ಯದರ್ಶಿ ಡಿ. ಟಿ. ಫ್ರಾಂಕೊ ತಿಳಿಸಿದ್ದಾರೆ.
ನೌಕರರ ಬೇಡಿಕೆಗಳನ್ನು ಈಡೇರಿಸುವ ಎಲ್ಲ ಮಾತುಕತೆಗಳು ವಿಫಲವಾಗಿರುವುದರಿಂದ, ಬ್ಯಾಂಕ್ ನೌಕರರ ಸಂಘಟನೆಗಳು ತಾವು ಈಗಾಗಲೇ ಕೊಟ್ಟಿರುವ ನೊಟೀಸಿನ ಪ್ರಕಾರ ಆಗಸ್ಟ್ 22 ರ ಮಂಗಳವಾರ ಮುಷ್ಕರ ನಡೆಸುವುದು ಬಹುತೇಕ ಖಚಿತ ಎನ್ನಲಾಗಿದೆ