ನವದೆಹಲಿ: ನಿವೃತ್ತ ಚಂದಾದಾರರು ಆಧಾರ್ ಸಂಖ್ಯೆ ನೀಡದಯೇ ಭವಿಷ್ಯ ನಿಧಿಯ(ಪಿ.ಎಫ್) ಉಳಿತಾಯ ಖಾತೆಯಲ್ಲಿರುವ ಪಿಂಚಣಿಯನ್ನು ಹಿಂಪಡೆಯಬಹುದಾಗಿದೆ.
ಪಿಂಚಣಿ ಮೊತ್ತ ವಾಪಸು ಪಡೆಯಲು ಆಧಾರ್ ಸಂಖ್ಯೆ ಕಡ್ಡಾಯ ಮಾಡಿ ಈ ಹಿಂದೆ ಭವಿಷ್ಯ ನಿಧಿ ಸಂಘಟನೆ ಆದೇಶ ಹೊರಡಿಸಿತ್ತು. ಆದರೆ ಸೇವಾವಧಿಯುದ್ದಕ್ಕೂ ವೇತನದಲ್ಲಿ ಉಳಿಸಿದ ಮೊತ್ತ ವಾಪಸು ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಸದಸ್ಯರು 10 ಸಿ ಫಾರ್ಮ್ ಭರ್ತಿ ಮಾಡುವ ಮೂಲಕ ಭವಿಷ್ಯ ನಿಧಿ ಖಾತೆಯಲ್ಲಿರುವ ಪಿಂಚಣಿ ಹಣವನ್ನು ಹಿಂಪಡೆದುಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಪಿಂಚಣಿ ಮೊತ್ತ ವಾಪಸು ಪಡೆಯಲು ಆಧಾರ್ ಕಡ್ಡಾಯಗೊಳಿಸಲಾಗಿತ್ತು. ಆದರೆ ಆಧಾರ್ ಕಾರ್ಡ್ ಇಲ್ಲದೆ ಇರುವವರು ಭವಿಷ್ಯ ನಿಧಿ ವಾಪಸು ಪಡೆಯಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹಲವು ದೂರುಗಳು ಬಂದಿದ್ದವು.