ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಾರಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಬಂಡವಾಳ ಪುನಶ್ಚೇತನ ವಿಳಂಬವಾಗುವ ಸಾಧ್ಯತೆಯಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಉದ್ಯಮ ಪ್ರಕ್ರಿಯೆಯನ್ನು ಸುಲಭಗೊಳಿಸಲು ಹೊಸ ಪರೋಕ್ಷ ತೆರಿಗೆ ಪದ್ಧತಿಯನ್ನು ಸರಳಗೊಳಿಸುವ ಆಶಾವಾದವನ್ನು ಕೇಂದ್ರೀಯ ಬ್ಯಾಂಕ್ ವ್ಯಕ್ತಪಡಿಸಿದೆ.
2017-18ನೇ ಆರ್ಥಿಕ ವರ್ಷದ ನಾಲ್ಕನೇ ದ್ವೈಮಾಸಿಕ ನೀತಿ ಪರಾಮರ್ಶೆಯನ್ನು ಪ್ರಕಟಿಸಿದ ಬ್ಯಾಂಕ್, ಈ ಹಿಂದೆ ಅಂದಾಜು ಮಾಡಿದ ಶೇಕಡಾ 7.3ರಿಂದ ಆರ್ಥಿಕ ಬೆಳವಣಿಗೆ ಶೇಕಡಾ 6.7ಕ್ಕೆ ತಗ್ಗಲಿದೆ ಎಂದು ಹೇಳಿದರು.
ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಆರಂಭಿಕ ಹಂತದ ಎಡರು ತೊಡರುಗಳನ್ನು ಸದ್ಯದಲ್ಲಿಯೇ ನಿವಾರಿಸಿ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಬೆಳವಣಿಗೆ ವೇಗಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಆರ್ ಬಿಐ ಹೇಳಿದೆ.
ಇಲ್ಲಿಯವರೆಗೆ ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ದೇಶದ ಆರ್ಥಿಕ ಬೆಳವಣಿಗೆ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಉತ್ಪಾದಕ ವಲಯದಲ್ಲಿನ ಅನಿಶ್ಚಿತತೆ ಅಲ್ಪಾವಧಿಯದ್ದಾಗಿರುತ್ತದೆ. ಹೂಡಿಕೆ ಚಟುವಟಿಕೆಗೆ ಆದ್ಯತೆ ನೀಡುವ ಅಗತ್ಯವಿದೆ ಎಂದು ಆರ್ ಬಿಐ ಹೇಳಿದೆ.
ಕಳೆದ ವರ್ಷಕ್ಕಿಂತ ಈ ವರ್ಷ ಜುಲೈಯಲ್ಲಿ ಕೈಗಾರಿಕಾ ಉತ್ಪಾದನೆ ಕೇವಲ ಶೇಕಡಾ 1.2ರಷ್ಟು ಬೆಳವಣಿಗೆ ಕಂಡಿದೆ. ಇದೇ ಸಮಯಕ್ಕೆ ಕಳೆದ ವರ್ಷ ಶೇಕಡಾ 4.5ರಷ್ಟಿತ್ತು. ಉತ್ಪಾದನಾ ವಲಯ ಅದರಲ್ಲೂ ವಿಶೇಷವಾಗಿ ಬಂಡವಾಳ ಸರಕುಗಳು ಕಳಪೆ ಸಾಧನೆಯನ್ನು ಮಾಡಿವೆ.
ಸರಕು ಮತ್ತು ಸೇವಾ ತೆರಿಗೆ ಜಾರಿಯಾದ ಆರಂಭದ ಎರಡು ತಿಂಗಳಲ್ಲಿ ಸರ್ಕಾರ 1.9 ಲಕ್ಷ ಕೋಟಿ ರೂಪಾಯಿ ಸಂಗ್ರಹಿಸಿದೆ. ಆದರೆ ನೀತಿ ನಿಯಮಗಳು ಕಠಿಣವಾಗಿದೆ ಎಂದು ಸಣ್ಣ ಉದ್ದಿಮೆದಾರರು ಮತ್ತು ರಫ್ತುದಾರರು ಆರೋಪಿಸುತ್ತಿದ್ದಾರೆ.
ಜಿಎಸ್ ಟಿ ಅಡಿಯಲ್ಲಿ ಪ್ರತಿ ತಿಂಗಳು ದಾಖಲಾತಿ ಹೊಂದಿದ ಉದ್ದಿಮೆದಾರರು ಆನ್ ಲೈನ್ ನಲ್ಲಿ ರಿಟರ್ನ್ ಸಲ್ಲಿಕೆ ಮಾಡಬೇಕು.