ನಿನ್ನೆ ನಡೆದ ಜಿಎಸ್ ಟಿ ಸಮಿತಿ ಸಭೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಈ ಮಹತ್ವದ ಕ್ರಮ ಕೈಗೊಂಡಿದ್ದು, 50 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳಿಗೆ ಪ್ಯಾನ್ ಕಾರ್ಡ್ ಮತ್ತು ಕೆವೈಸಿ ಕಡ್ಡಾಯವಿಲ್ಲ ಎಂದು ಹೇಳಿದೆ. ಅಷ್ಟು ಮಾತ್ರವಲ್ಲದೇ ಈ ಹಿಂದೆ 50 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಖರೀದಿಸುವ ಗ್ರಾಹಕರ ಮಾಹಿತಿ ಕೂಡ ಸರ್ಕಾರಕ್ಕೆ ನೀಡಬೇಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಹಿಂದೆ ನೋಟು ನಿಷೇಧದ ಬಳಿಕ ಅಕ್ರಮ ಹಣ ಮತ್ತು ಕಪ್ಪು ಹಣ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ನಿಗ್ರಹ ಕಾಯ್ದೆಯಡಿಯಲ್ಲಿ 50 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಗಳಿಗೆ ಪ್ಯಾನ್ ಕಾರ್ಡ್ ಮತ್ತು ಕೆವೈಸಿ ಕಡ್ಡಾಯಗೊಳಿಸಿತ್ತು. ಅಲ್ಲದೆ ಈ ರೀತಿ 50 ಸಾವಿರ ರೂಗಳಿಗೂ ಅಧಿಕ ಪ್ರಮಾಣದ ಆಭರಣ ಖರೀದಿಸುವ ಗ್ರಾಹಕರ ಮಾಹಿತಿಯನ್ನು ಕಡ್ಡಾಯವಾಗಿ ಸಂಗ್ರಹಿಸುವಂತೆ ನಿರ್ದೇಶನ ನೀಡಲಾಗಿತ್ತು. ಸರ್ಕಾರದ ಈ ಕ್ರಮಗಳಿಂದಾಗಿ ಗ್ರಾಹಕರಿಗೆ ಮಾತ್ರವಲ್ಲದೇ ಚಿನ್ನದ ಆಭರಣ ಮಾರಾಟಗಾರರಿಗೂ ತೊಂದರೆಯಾಗುತ್ತಿತ್ತು. ಅಂತೆಯೇ ಜಿಎಸ್ ಟಿ ಜಾರಿ ಬಳಿಕ ಆಭರಣಗಳ ಮಾರಾಟ ಪ್ರಮಾಣದಲ್ಲಿ ಶೇ.50 ರಿಂದ 60ರಷ್ಟು ಗಣನೀಯ ಇಳಿಕೆಯಾಗಿತ್ತು ಎಂದು ಹೇಳಲಾಗಿದೆ.