ಮುಂಬೈ: ಸುಮಾರು 3.6 ಲಕ್ಷ ಕೋಟಿ ರೂಪಾಯಿ ಸಂಯೋಜಿತ ಸಾಲಗಳನ್ನು ಹೊಂದಿರುವ ಸುಮಾರು 70 ದೊಡ್ಡ ಖಾತೆಗಳಿಗೆ ಸಂಕಲ್ಪ ಯೋಜನೆಗಳನ್ನು ಅಂತಿಮಗೊಳಿಸುವ 180 ದಿನಗಳ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗಡುವು ನಿನ್ನೆಗೆ ಮುಗಿದಿದೆ.
ಇದರಿಂದ ತೀವ್ರ ಹಾನಿಗೊಳಗಾದವರು ಇಂಧನ ಉತ್ಪಾದಕರು. ಕಳೆದ ಫೆಬ್ರವರಿ 12ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 6 ತಿಂಗಳ ಗಡುವು ನೀಡಿ ಹೊರಡಿಸಿದ್ದ ಸುತ್ತೋಲೆಗೆ ಸಂಬಂಧಿಸಿದಂತೆ ಮಧ್ಯಂತರ ಪರಿಹಾರವನ್ನು ಕೊಡಿಸಲು ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದೆ.
ಇದೀಗ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿದ್ದು ಇಂದು ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ. ಇದೀಗ ಸುಪ್ರೀಂ ಕೋರ್ಟ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಸೂಲಾಗದ ಸಾಲದ ಪ್ರಮಾಣ(ಎನ್ ಪಿಎ) ಹೆಚ್ಚಾಗುತ್ತಿರುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮ ಕೈಗೊಳ್ಳದಿರಲು ಏನು ಕಾರಣ ಎಂದು ಸಂಸತ್ತಿನ ಹಣಕಾಸು ಸಮಿತಿ ಭಾರತೀಯ ರಿಸರ್ವ್ ಬ್ಯಾಂಕ್ ಗೆ ಪ್ರಶ್ನಿಸಿದೆ.
ಇದೀಗ ಬ್ಯಾಂಕುಗಳು ಸಾಲಗಳನ್ನು ವಸೂಲು ಮಾಡುವ ಕುರಿತು ಕೊನೆ ಕ್ಷಣದ ಹೋರಾಟ ನಡೆಸುತ್ತಿದ್ದರೆ ಸಾಲ ಪಡೆದುಕೊಂಡವರಿಗೆ ಸಹ ನೆಮ್ಮದಿಯಿಂದಿರಲು ಸಾಧ್ಯವಿಲ್ಲ. ಏಕೆಂದರೆ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧೀಕರಣ(ಎನ್ ಸಿಎಲ್ ಟಿ) ಪ್ರಕ್ರಿಯೆ ಆರಂಭಗೊಂಡರೆ ಸಾಲಗಾರರು ಮತ್ತೆ 180 ದಿನಗಳ ಪುನರ್ ಯೋಜನೆ ಸಮಯವನ್ನು ಪಡೆಯುತ್ತಾರೆ. ಬೃಹತ್ ಸಾಲ ಉಳಿಸಿಕೊಂಡಿರುವ 70 ಖಾತೆಗಳಲ್ಲಿ 35 ಇಂಧನಕ್ಕೆ ಸೇರಿದ್ದವಾಗಿದ್ದು ಉಳಿದವು ಟೆಲಿಕಾಂ ಮತ್ತು ಇತರ ವಲಯಗಳಿಗೆ ಸೇರಿದವುಗಳಾಗಿವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಪ್ರಮುಖ ಬ್ಯಾಂಕುಗಳು 20ರಿಂದ 25 ಖಾತೆಗಳನ್ನು ಮತ್ತೆ ಸದ್ಯದಲ್ಲಿಯೇ ಮರುವಿಂಗಡಣೆ ಮಾಡಲಾಗುವುದೆಂಬ ಸೂಚನೆ ನೀಡಿದೆ.
Advertisement