ರಾಜ್ಯಗಳಲ್ಲಿ ಅಧಿಕ ಆದಾಯ ಕೊರತೆ; ಕೇಂದ್ರ ಸರ್ಕಾರಕ್ಕೆ ತಲೆನೋವು

ರಾಜ್ಯಗಳ ಅಧಿಕ ಆದಾಯದ ಕೊರತೆಯು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ.ನಿನ್ನೆ ...
ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಎಸ್ ಟಿ ಮಂಡಳಿ ಸಭೆಯಲ್ಲಿ  ಭಾಗವಹಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ದೆಹಲಿಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಭಾಗವಹಿಸಿದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ನವದೆಹಲಿ: ರಾಜ್ಯಗಳ ಅಧಿಕ ಆದಾಯದ ಕೊರತೆಯು ಕೇಂದ್ರ ಸರ್ಕಾರಕ್ಕೆ ಅತಿದೊಡ್ಡ ಸಮಸ್ಯೆಯಾಗಿದೆ.ನಿನ್ನೆ ನಡೆದ ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 30ನೇ ಸಭೆಯಲ್ಲಿ, 25 ರಾಜ್ಯಗಳು ಆದಾಯ ಕೊರತೆಯನ್ನು ಅನುಭವಿಸುತ್ತಿದ್ದು ಕೇಂದ್ರ ಸರ್ಕಾರದಿಂದ ಪರಿಹಾರ ಪಡೆಯಲಿದೆ. 
ಕಳೆದ ವರ್ಷಕ್ಕಿಂತ ಈ ವರ್ಷ ಪರಿಸ್ಥಿತಿ ಉತ್ತಮವಾಗಿದೆ ಎಂದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅನೇಕ ರಾಜ್ಯಗಳು ಅಧಿಕ ಆದಾಯದ ಕೊರತೆಯನ್ನು ಅನುಭವಿಸುತ್ತಿವೆ. ಕಳೆದ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಅದು ರಾಷ್ಟ್ರೀಯ ಸರಾಸರಿ ಆದಾಯ ಕೊರತೆ ಶೇಕಡಾ 13ಕ್ಕಿಂತ ಕಡಿಮೆಯಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಕಳೆದ ನಾಲ್ಕು ವರ್ಷಗಳ ಹಿಂದೆ ರಾಷ್ಟ್ರದ ಸರಾಸರಿ ಆದಾಯ ಕೊರತೆ ಶೇಕಡಾ 16ರಷ್ಟಿತ್ತು. ಅದೀಗ ಶೇಕಡಾ 13ಕ್ಕೆ ಇಳಿದಿದೆ. ಅದು ಈ ವರ್ಷದ ಕೊನೆಗೆ ಶೇಕಡಾ ಶೇಕಡಾ 12 ಅಥವಾ ಶೇಕಡಾ 11ಕ್ಕೆ ಇಳಿಯಲಿದೆ ಎಂಬ ಆಶಾವಾದವಿದೆ. 5 ವರ್ಷಗಳ ಆಳ್ವಿಕೆ ಮುಗಿಯುವ ಹೊತ್ತಿಗೆ ಶೂನ್ಯಕ್ಕೆ ಬರುವ ಆಶಾವಾದ ಇದೆ ಎನ್ನುತ್ತಾರೆ ಕೇಂದ್ರ ಹಣಕಾಸು ಸಚಿವರು. 
ಪ್ರಸಕ್ತ ಹಣಕಾಸು ವರ್ಷದಲ್ಲಿ ಮಿಜೋರಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಲ್ಯಾಂಡ್, ಸಿಕ್ಕಿಂ ಮತ್ತು ಆಂಧ್ರಪ್ರದೇಶ ರಾಜ್ಯಗಳ ಆದಾಯ ನಿರೀಕ್ಷೆಗಿಂತ ಹೆಚ್ಚಾಗಿದೆ. ಹೀಗಾಗಿ ಈ ರಾಜ್ಯಗಳಿಗೆ ಕೇಂದ್ರದಿಂದ ಪರಿಹಾರದ ಅಗತ್ಯವಿಲ್ಲ. ಉಳಿದ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ಹಣಕಾಸು ಕಾರ್ಯದರ್ಶಿ ಹಮ್ಸುಖ್ ಆದಿಯಾ ಇದುವರೆಗೆ ಪುದುಚೆರಿ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಚತ್ತೀಸ್ ಗಢ ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಿ ಆದಾಯದ ಕೊರತೆಗೆ ಕಾರಣವೇನು ಎಂದು ಪರಿಶೀಲಿಸಿದ್ದಾರೆ.
ಹಮ್ಸುಖ್ ಆದಿಯಾ ಸದ್ಯದಲ್ಲಿಯೇ ಉತ್ತರಾಖಂಡ್ ಗೆ ಭೇಟಿ ನೀಡಲಿದ್ದಾರೆ. ಅಲ್ಲಿ ಕಳೆದ ಏಪ್ರಿಲ್ ನಿಂದ ಆಗಸ್ಟ್ ವರೆಗೆ ಹಣಕಾಸು ವರ್ಷದ ತ್ರೈಮಾಸಿಕದಲ್ಲಿ ಶೇಕಡಾ 35ರಷ್ಟು ಆದಾಯ ಸಂಗ್ರಹ ಕೊರತೆಯುಂಟಾಗಿದೆ. ಜಿಎಸ್ಟಿಯಿಂದ ಆದಾಯ ಸಂಗ್ರಹಣೆ ಆಗಸ್ಟ್ ತಿಂಗಳಲ್ಲಿ 93,960 ಕೋಟಿ ರೂಪಾಯಿಗೆ ಇಳಿದಿದೆ. ಏಪ್ರಿಲ್ ನಿಂದ ಆಗಸ್ಟ್ ವರೆಗೆ ಸರಾಸರಿ ಆದಾಯ ಸಂಗ್ರಹ 96,705 ಕೋಟಿ ರೂಪಾಯಿ ಆಗಿದೆ. ಅಲ್ಲಿನ ಸರ್ಕಾರ ತಿಂಗಳ ಆದಾಯ ಸಂಗ್ರಹ ಸುಮಾರು 1 ಲಕ್ಷ ಕೋಟಿ ಗುರಿ ಇಟ್ಟುಕೊಂಡಿದ್ದು ಕಡಿಮೆ ಸಂಗ್ರಹವಾಗಿದೆ.
ಪ್ರವಾಹ ಪೀಡಿತ ಕೇರಳ ಸರ್ಕಾರಕ್ಕೆ ಹೆಚ್ಚಿನ ಆದಾಯ ಸಂಗ್ರಹಕ್ಕೆ ಶೇಕಡಾ 10ರಷ್ಟು ತೆರಿಗೆ ವಿಧಿಸುವ ಕುರಿತು ನಿರ್ಧರಿಸಲು ಜಿಎಸ್ ಟಿ ಮಂಡಳಿ ನಿನ್ನೆಯ ಸಭೆಯಲ್ಲಿ 7 ಸದಸ್ಯರನ್ನೊಳಗೊಂಡ ಸಚಿವರ ತಂಡವನ್ನು ರಚಿಸಲು ಶಿಫಾರಸು ಮಾಡಿತು. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ವಿಪತ್ತು ನಿರ್ವಹಣಾ ನಿಧಿಯ ಹೊರತಾಗಿ ಕೇರಳ ರಾಜ್ಯಕ್ಕೆ ಅಧಿಕ ಆದಾಯ ಸಂಗ್ರಹಕ್ಕೆ ಆದಾಯ-ಸಂಗ್ರಹಣೆ ಯಾಂತ್ರಿಕ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆಯೇ ಎಂದು ಪರಿಶೀಲಿಸಲು ಸಚಿವರ ಗುಂಪು ಪರಿಶೀಲಿಸಲಿದೆ. ಇನ್ನು ಕೆಲವು ವಾರಗಳಲ್ಲಿ ಈ ಸಚಿವರ ತಂಡ ಕೇಂದ್ರ ಸರ್ಕಾರಕ್ಕೆ ವರದಿ ಒಪ್ಪಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com