ಸುಪ್ರೀಂ ಆದೇಶಕ್ಕೆ ಹೆದರಿದ ಏರ್ ಟೆಲ್: ಮೊದಲ ಹಂತವಾಗಿ 10 ಸಾವಿರ ಕೋಟಿ ಪಾವತಿಗೆ ಮುಂದಾಯ್ತು!

ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಬಡ್ಡಿ ಹಾಗೂ ದಂಡ ಸಹಿತ ಪಾವತಿಸಿ ಎಂದು ಸುಪ್ರೀಂ ಆದೇಶಿದ ಬೆನ್ನಲ್ಲೇ ಏರ್ ಟೆಲ್ ಕಂಪನಿ ಮೊದಲ ಹಂತದಲ್ಲಿ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುವುದಾಗಿ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ) ಜೊತೆ ಪ್ರಸ್ತಾಪಿಸಿದೆ.
ಏರ್ ಟೆಲ್
ಏರ್ ಟೆಲ್

ನವದೆಹಲಿ: ಸರ್ಕಾರಕ್ಕೆ ಬಾಕಿ ಉಳಿಸಿಕೊಂಡಿದ್ದ ಹಣವನ್ನು ಬಡ್ಡಿ ಹಾಗೂ ದಂಡ ಸಹಿತ ಪಾವತಿಸಿ ಎಂದು ಸುಪ್ರೀಂ ಆದೇಶಿದ ಬೆನ್ನಲ್ಲೇ ಏರ್ ಟೆಲ್ ಕಂಪನಿ ಮೊದಲ ಹಂತದಲ್ಲಿ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುವುದಾಗಿ ಟೆಲಿಕಮ್ಯುನಿಕೇಷನ್ ಇಲಾಖೆ(ಡಿಒಟಿ) ಜೊತೆ ಪ್ರಸ್ತಾಪಿಸಿದೆ. 

ಫೆಬ್ರವರಿ 20ರೊಳಗೆ 10 ಸಾವಿರ ಕೋಟಿ ರುಪಾಯಿಯನ್ನು ಪಾವತಿಸುತ್ತೇವೆ. ಇನ್ನುಳಿದ ಹಣವನ್ನು ಮುಂದಿನ ವಿಚಾರಣೆ ದಿನಾಂಕದೊಳಗೆ ಪಾವತಿಸುವುದಾಗಿ ಏರ್ ಟೆಲ್ ಡಿಒಟಿಗೆ ತಿಳಿಸಿದೆ. 

"ಅದೇನೇ ಇದ್ದರೂ, ಗೌರವಾನ್ವಿತ ಸುಪ್ರೀಂ ಕೋರ್ಟ್ ನ ತೀರ್ಪು ಮತ್ತು ಅವರ ನಿರ್ದೇಶನಕ್ಕೆ ಅನುಸಾರವಾಗಿ, ನಾವು ಫೆಬ್ರವರಿ 20, 2020ರೊಳಗೆ ಭಾರತಿ ಗ್ರೂಪ್ ಕಂಪನಿಗಳ ಪರವಾಗಿ 10,000 ಕೋಟಿ ರೂ.(ಖಾತೆಯಲ್ಲಿ) ಠೇವಣಿ ಇಡುತ್ತೇವೆ" ಎಂದು ಏರ್ಟೆಲ್ ಡಿಒಟಿ ಇಲಾಗೆ(ಹಣಕಾಸು) ಪತ್ರದ ಮೂಲಕ ತಿಳಿಸಿದೆ.

ಟೆಲಿಕಾಂ ಕಂಪನಿಗಳು ಬಾಕಿ ಉಳಿಸಿ ಕೊಂಡಿರುವ ಹೊಂದಾಣಿಕೆ ಮಾಡಿದ ಒಟ್ಟು ವರಮಾನ(ಎಜಿಆರ್‌)ದ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ, ಸುಪ್ರೀಂ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಕೇಂದ್ರ ಟೆಲಿಕಮ್ಯುನಿಕೇಷನ್ ಇಲಾಖೆಯನ್ನು ಸರ್ವೋಚ್ಛ ನ್ಯಾಯಾಲಯ ಇಂದು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಬಳಿಕ ಎಚ್ಚೆತ್ತುಕೊಂಡ ಡಿಒಟಿ, ಇಂದು ಮಧ್ಯರಾತ್ರಿಯೊಳಗೆ ಬಾಕಿ ಪಾವತಿಸುವಂತೆ ಭಾರತಿ ಏರ್ಟೆಲ್ ಹಾಗೂ ವೊಡಾಫೋನ್ ಗೆ ಆದೇಶಿಸಿದೆ.

ವೊಡಾಫೋನ್ ಐಡಿಯಾ 50 ಸಾವಿರ ಕೋಟಿ, ಭಾರತಿ ಏರ್ಟೆಲ್ 35,586 ಕೋಟಿ ಹಾಗೂ ತನ್ನ ವ್ಯವಹಾರವನ್ನುಏರ್ಟೆಲ್ ಗೆ ಮಾರಾಟ ಮಾಡಿರುವ ಟಾಟಾ ಟೆಲೆ ಸರ್ವಿಸಸ್ 14 ಸಾವಿರ ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದಾರೆ.

ಸರ್ಕಾರಕ್ಕೆ ದೂರಸಂಪರ್ಕ ಕಂಪನಿಗಳು ಪರವಾನಗಿ ಶುಲ್ಕ ₹92,642 ಕೋಟಿ ಹಾಗೂ ತರಂಗಾಂತರಗಳ ಬಳಕೆ ಶುಲ್ಕ ₹55,054 ಕೋಟಿ ಒಟ್ಟಾರೆ 1.47 ಲಕ್ಷ ಕೋಟಿ ಬಾಕಿ ಇರುವುದಾಗಿ ಸಚಿವ ರವಿಶಂಕರ್‌ ಪ್ರಸಾದ್‌ ಲೋಕಸಭೆಗೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com