ಜಿಎಸ್ ಟಿ ಸಲ್ಲಿಕೆ ದಿನಾಂಕ ವಿಸ್ತರಣೆ: ತಡವಾದ ಪಾವತಿಗೆ ಶುಲ್ಕ, ದಂಡ ವಿನಾಯ್ತಿ
ನವದೆಹಲಿ: ಕೋವಿಡ್ 19 ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿರುವುದರಿಂದ 2018-19ನೇ ಆರ್ಥಿಕ ಸಾಲಿನ ವಾರ್ಷಿಕ ಜಿಎಸ್ ಟಿ ಸಲ್ಲಿಕೆ ದಿನಾಂಕವನ್ನು ಕೇಂದ್ರ ಸರ್ಕಾರ ಸೆಪ್ಟೆಂಬರ್ 30ಕ್ಕೆ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಜಿಎಸ್ ಟಿ ಸಲ್ಲಿಕೆಗೆ ಜೂನ್ 30 ಕಡೆಯ ದಿನವಾಗಿತ್ತು.
ನಿನ್ನೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 5 ಕೋಟಿಗಿಂತ ಕಡಿಮೆ ವಹಿವಾಟು ನಡೆಸಿದ ಕಂಪೆನಿಗಳು ಬಡ್ಡಿ ಅಥವಾ ದಂಡ ಕಟ್ಟಬೇಕಾಗಿಲ್ಲ. ದೊಡ್ಡ ಕಂಪೆನಿಗಳಿಗೆ ಸಹ ತಡವಾಗಿ ಶುಲ್ಕ ಪಾವತಿಸಿದ್ದಕ್ಕೆ ದಂಡ ಅನ್ವಯವಾಗುವುದಿಲ್ಲ. ಕೇವಲ ಶೇಕಡಾ 9ರ ಬಡ್ಡಿ ಪಾವತಿಸಬೇಕಾಗುತ್ತದೆ. ಇದು ಕೇವಲ ದೊಡ್ಡ ಕಂಪೆನಿಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.
ಇದೇ ರೀತಿ ನೋಟಿಸ್, ಅಧಿಸೂಚನೆ, ಅನುಮೋದನೆ ಆದೇಶ, ಮಂಜೂರಾತಿ ಆದೇಶ, ಮೇಲ್ಮನವಿ ಸಲ್ಲಿಸುವುದು, ರಿಟರ್ನ್ ಸಲ್ಲಿಸುವುದು, ಹೇಳಿಕೆಗಳು, ಅರ್ಜಿಗಳು, ವರದಿಗಳು, ಇನ್ನಾವುದೇ ದಾಖಲೆಗಳು, ಜಿಎಸ್ಟಿ ಕಾನೂನಿನಡಿಯಲ್ಲಿ ಯಾವುದೇ ಅನುಸರಣೆಗೆ ಕಾಲಮಿತಿಯನ್ನು ಜೂನ್ 30 ಕ್ಕೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ