ನವದೆಹಲಿ: 20,000 ಕೋಟಿ ತೆರಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ತೀರ್ಪೊಂದನ್ನು ಸರ್ಕಾರ ಪ್ರಶ್ನಿಸಲು ಮುಂದಾಗಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಮಧ್ಯಸ್ಥಿಕೆ ನಿರ್ಧಾರವನ್ನು ಪ್ರಶ್ನಿಸಲಿದೆ.
ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಪು ಸಾರ್ವಭೌಮ ಹಕ್ಕು ಹೊಂದಿರುವ ಸಂಸತ್ ಅಂಗೀಕರಿಸಿರುವ ಕಾನೂನಿನ ವಿರುದ್ಧ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಸಾಲಿಸಿಟರ್ ಜನರಲ್ ಅಭಿಪ್ರಾಯಪಟ್ಟಿದ್ದು, ಸರ್ಕಾರಕ್ಕೆ ವೊಡೋಫೋನ್ ಪರವಾಗಿ ಬಂದಿರುವ ನಿರ್ಧಾರವನ್ನು ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ.
ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಧಿಕರಣ ಕಳೆದ ತಿಂಗಳು ನೀಡಿದ್ದ ತೀರ್ಪಿನಲ್ಲಿ ವೊಡೋಫೋನ್ ಸಂಸ್ಥೆಯ ಮೇಲೆ ಭಾರತ ಸರ್ಕಾರ ಹೊರಿಸಿರುವ ತೆರಿಗೆ ಭಾರ, ಬಡ್ಡಿ ಹಾಗೂ ದಂಡದ ಮೊತ್ತ ಭಾರತ ಹಾಗೂ ನೆದರ್ಲ್ಯಾಂಡ್ ನ ನಡುವಿನ ಹೂಡಿಕೆ ಒಪ್ಪಂದವನ್ನು ಉಲ್ಲಂಘಿಸುತ್ತದೆ ಎಂದು ತೀರ್ಪು ನೀಡಿತ್ತು. ಪರಿಣಾಮ ಭಾರತದಲ್ಲಿ ಹೂಡಿಕೆ ಮಾಡಿರುವ ನೆದರ್ಲ್ಯಾಂಡ್ ಮೂಲದ ಸಂಸ್ಥೆಗೆ 20,000 ಕೋಟಿ ರೂಪಾಯಿ ತೆರಿಗೆ ಮೊತ್ತದ ಭಾರ ಕಡಿಮೆಯಾಗುವ ಸಂಭವವಿತ್ತು.
ವೊಡೋಫೋನ್ ಸಂಸ್ಥೆಯಿಂದ ಭಾರತ ಸರ್ಕಾರ ತೆರಿಗೆ ರೂಪದಲ್ಲಿ ಬಾಕಿ ಹಣವನ್ನು ಪಡೆಯುವುದನ್ನು ನಿಲ್ಲಿಸಬೇಕು ಹಾಗೂ ಸರ್ಕಾರವೇ ಸಂಸ್ಥೆಗೆ 40 ಕೋಟಿ ರೂಪಾಯಿಗಳನ್ನು ಕಾನೂನು ವೆಚ್ಚಗಳಿಗೆ ಆಗಿರುವ ಖರ್ಚನ್ನು ಪರಿಹಾರದ ರೂಪವಾಗಿ ಭರಿಸಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ಹೇಳಿತ್ತು.
Advertisement