ಸೈರಸ್ ಮಿಸ್ತ್ರಿ: ಟಾಟಾ ಗ್ರೂಪ್ ಜೊತೆ ಎಸ್ ಪಿ ಗ್ರೂಪ್ ವಂಶಸ್ಥನ ನಂಟು, ಕಾನೂನು ಹೋರಾಟ, ನಿರ್ಗಮನ
ಅದು, 2016ರ ಅಕ್ಟೋಬರ್ 24, ಟಾಟಾ ಸನ್ಸ್ ಕಂಪೆನಿ ಕಡೆಯಿಂದ 100 ಶಬ್ದಗಳಲ್ಲಿ ಸೈರಸ್ ಮಿಸ್ತ್ರಿಯವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಲಾಗಿದೆ, ರತನ್ ಟಾಟಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಹೇಳಿಕೆ ಹೊರಬಿದ್ದಿತ್ತು.
Published: 05th September 2022 12:45 PM | Last Updated: 05th September 2022 02:00 PM | A+A A-

ಸೈರಸ್ ಮಿಸ್ತ್ರಿ, ರತನ್ ಟಾಟಾ(ಸಂಗ್ರಹ ಚಿತ್ರ)
ನವದೆಹಲಿ: ಅದು, 2016ರ ಅಕ್ಟೋಬರ್ 24, ಟಾಟಾ ಸನ್ಸ್ ಕಂಪೆನಿ ಕಡೆಯಿಂದ 100 ಶಬ್ದಗಳಲ್ಲಿ ಸೈರಸ್ ಮಿಸ್ತ್ರಿಯವರನ್ನು ಅಧ್ಯಕ್ಷ ಹುದ್ದೆಯಿಂದ ತೆಗೆದುಹಾಕಲಾಗಿದೆ, ರತನ್ ಟಾಟಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಹೇಳಿಕೆ ಹೊರಬಿದ್ದಿತ್ತು.
ದೇಶದ ಪ್ರಮುಖ ಕೈಗಾರಿಕೋದ್ಯಮ ಸಂಸ್ಥೆಯಿಂದ ಹೊರಬಿದ್ದ ಈ ಹೇಳಿಕೆ ಅಂದು ಕಾರ್ಪೊರೇಟ್ ಜಗತ್ತಿನಲ್ಲಿ ಸಾಕಷ್ಟು ಸದ್ದು ಮಾಡಿತ್ತು. ನಂತರ ಟಾಟಾ ಗ್ರೂಪ್ ಮತ್ತು ಸೈರಸ್ ಮಿಸ್ತ್ರಿಯವರ ನಡುವೆ ಸಾರ್ವಜನಿಕವಾಗಿ ವಾದ-ವಿವಾದಗಳು ನಡೆದವು. ಸೈರಸ್ ಮಿಸ್ತ್ರಿಯವರ ಶಪೂರ್ಜಿ ಪಲ್ಲೂಂಜಿ ಗ್ರೂಪ್(ಎಸ್ ಪಿ ಗ್ರೂಪ್) ಟಾಟಾ ಸನ್ಸ್ ಕಂಪೆನಿಯಲ್ಲಿ ಶೇಕಡಾ 18ರಷ್ಟು ಪಾಲನ್ನು ಹೊಂದಿತ್ತು.
ತಮ್ಮನ್ನು ಏಕಾಏಕಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದ್ದನ್ನು ಪ್ರಶ್ನಿಸಿ ಮಿಸ್ತ್ರಿ ರಾಷ್ಟ್ರೀಯ ಕಾನೂನು ಪ್ರಾಧಿಕಾರ(NCLT)ಗೆ ಹೋದರು. ಪ್ರಾಧಿಕಾರಕ್ಕೆ ಸಲ್ಲಿಸಿದ್ದ ದೂರಿನಲ್ಲಿ ಮಿಸ್ತ್ರಿ, ಟಾಟಾ ಸನ್ಸ್ ನಲ್ಲಿ ಹಿಂದಿನ ದುರುಪಯೋಗದ ಆಡಳಿತ ಕ್ರಮಗಳನ್ನು ತಡೆಯಲು, ರತನ್ ಟಾಟಾ ಅವರು ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವುದನ್ನು ತಡೆಯಲು ಮತ್ತು ಟಾಟಾ ಟ್ರಸ್ಟ್ಗಳ ಪಾತ್ರವನ್ನು ನಿಯಂತ್ರಿಸಲು ಔಪಚಾರಿಕ ಆಡಳಿತದ ಚೌಕಟ್ಟನ್ನು ಸ್ಥಾಪಿಸಲು ತಾವು ನಡೆಸಿದ ಪ್ರಯತ್ನಗಳನ್ನು ಕೆಡವಲು ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿದೆ ಎಂದು ದೂರಿದ್ದರು.
ಇದನ್ನೂ ಓದಿ: ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವು: ಕಾರು ಚಲಾಯಿಸುತ್ತಿದ್ದ ಮಹಿಳೆ ಯಾರು ಗೊತ್ತಾ?
ಆದರೆ ಮಿಸ್ತ್ರಿಯವರ ಎಲ್ಲಾ ಆರೋಪಗಳನ್ನು ಟಾಟಾ ಸನ್ಸ್ ತಳ್ಳಿಹಾಕಿತ್ತು. ರತನ್ ಟಾಟಾ ಅವರ ಹಸ್ತಕ್ಷೇಪದ ಆರೋಪದ ಮೇಲೆ, ಟಾಟಾ ಸನ್ಸ್ ಕಂಪನಿಯ ಮಂಡಳಿಯು, ಅವಕಾಶಗಳು ಮತ್ತು ಸವಾಲುಗಳನ್ನು ನಿರ್ವಹಿಸಲು ಸಂಪೂರ್ಣ ಸ್ವಾಯತ್ತತೆಯನ್ನು ಅಧ್ಯಕ್ಷರಿಗೆ ನೀಡುತ್ತದೆ. ಸಂಸ್ಕೃತಿ ಮತ್ತು ನೈತಿಕತೆ ಕಂಪೆನಿ ಹೆಸರಾಗಿದೆ. ಮಿಸ್ತ್ರಿ ಅವರು 2006 ರಿಂದ ಟಾಟಾ ಸನ್ಸ್ನ ನಿರ್ದೇಶಕರಾಗಿದ್ದಾರೆ. ಟಾಟಾ ಗ್ರೂಪ್ ವರ್ಷಗಳಲ್ಲಿ ತೆಗೆದುಕೊಂಡ ಎಲ್ಲಾ ಪ್ರಮುಖ ನಿರ್ಧಾರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಟಾಟಾ ಸನ್ಸ್ ಕಾನೂನು ಪ್ರಾಧಿಕಾರಕ್ಕೆ ಮಿಸ್ತ್ರಿಯವರ ಆರೋಪಕ್ಕೆ ಕೌಂಟರ್ ಕೊಟ್ಟು ಪತ್ರ ಬರೆದಿತ್ತು.
ಜುಲೈ 2018ರಲ್ಲಿ ಕಾನೂನು ಪ್ರಾಧಿಕಾರ ಮಿಸ್ತ್ರಿಯವರ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ ಅರ್ಜಿಯನ್ನು ತಿರಸ್ಕರಿಸಿತ್ತು. ತೀರ್ಪನ್ನು ಪ್ರಶ್ನಿಸಿ ಮಿಸ್ತ್ರಿಯವರು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿ(NCLAT) ಮೊರೆ ಹೋದರು, ಅದು ಮಿಸ್ತ್ರಿಯವರ ಪರವಾಗಿ ತೀರ್ಪು ನೀಡಿ ಮತ್ತೆ ಅವರನ್ನು ಟಾಟಾ ಸನ್ಸ್ ಗ್ರೂಪ್ ಅಧ್ಯಕ್ಷರನ್ನಾಗಿ ನೇಮಿಸುವಂತೆ ಆದೇಶ ನೀಡಿತ್ತು.
ಇದನ್ನೂ ಓದಿ: ಅಪಘಾತದಲ್ಲಿ ಮೃತಪಟ್ಟ ಟಾಟಾ ಸನ್ಸ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಬಗ್ಗೆ ನಿಮಗೆಷ್ಟು ಗೊತ್ತು?
NCLAT ಆದೇಶದ ವಿರುದ್ಧ, ಟಾಟಾ ಸನ್ಸ್ ಸುಪ್ರೀಂ ಕೋರ್ಟ್ಗೆ ಮೊರೆ ಹೋಯಿತು. ಇದು ಮಾರ್ಚ್ 2021 ರಲ್ಲಿ ಟಾಟಾ ಸನ್ಸ್ ಪರವಾಗಿ ತೀರ್ಪು ನೀಡಿ ಸೈರಸ್ ಪಲ್ಲೊಂಜಿ ಮಿಸ್ತ್ರಿ ಅವರನ್ನು ಗ್ರೂಪ್ನ ಕಾರ್ಯಕಾರಿ ಅಧ್ಯಕ್ಷ ಮತ್ತು ನಿರ್ದೇಶಕರಾಗಿ ತೆಗೆದುಹಾಕಿದ ಟಾಟಾ ಸನ್ಸ್ ನಿರ್ಧಾರವನ್ನು ಅನುಮೋದಿಸಿ, NCLAT ಆದೇಶವನ್ನು ರದ್ದುಗೊಳಿಸಿತು.