ಒಂದು ಸಾವಿರ ರೂ ಮುಖಬೆಲೆಯ ನೋಟಿನ ಮರು ಪರಿಚಯ ಇಲ್ಲ, ಪೋಸ್ಟ್ ಆಫೀಸ್ ನಲ್ಲಿ ನೋಟು ಬದಲಾವಣೆ ಇಲ್ಲ: ಆರ್ ಬಿಐ ಸ್ಪಷ್ಟನೆ
ಮುಂಬೈ: ದೇಶದಲ್ಲಿ 2 ಸಾವಿರ ಮುಖಬೆಲೆಯ ಗರಿಷ್ಠ ನೋಟು ಚಲಾವಣೆ ಹಿಂಪಡೆದ ಹಿನ್ನೆಲೆಯಲ್ಲಿ ಮತ್ತೆ 1 ಸಾವಿರ ರೂ ಮುಖಬೆಲೆಯ ನೋಟುಗಳನ್ನು ಪರಿಚಯಿಸುವ ವಿಚಾರದ ಕುರಿತು ಇದೇ ಮೊದಲ ಬಾರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಮಹತ್ವದ ಹೇಳಿಕೆ ನೀಡಿದೆ.
2 ಸಾವಿರ ಮುಖಬೆಲೆಯ ಗರಿಷ್ಠ ನೋಟು ಚಲಾವಣೆ ಹಿಂಪಡೆದ ಹಿನ್ನೆಲೆಯಲ್ಲಿ ಇಂದಿನಿಂದ ಬ್ಯಾಂಕುಗಳಲ್ಲಿ ನೋಟುಗಳ ಬದಲಾವಣೆಗೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಆರ್ ಬಿಐ ಮುಖ್ಯಸ್ಥ ಶಕ್ತಿಕಾಂತ್ ದಾಸ್ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. '2000 ರೂಪಾಯಿ ಬೆಲೆಯ ನೋಟು ಹಿಂಪಡೆದ ನಿರ್ಧಾರದಿಂದ ದೇಶದ ಆರ್ಥಿಕತೆ ಮೇಲೆ “ಅತ್ಯಂತ ಕನಿಷ್ಠ ಪರಿಣಾಮ” ಬೀರುತ್ತದೆ. ಭಾರತೀಯ ಕರೆನ್ಸಿ ನಿರ್ವಹಣಾ ವ್ಯವಸ್ಥೆ ತುಂಬಾ ದೃಢವಾಗಿದೆ. ಡಾಲರ್ ವಿರುದ್ಧ ನಮ್ಮ ವಿನಿಮಯ ದರ ಬಲಿಷ್ಠವಾಗಿದೆ. ಚಲಾವಣೆಯಲ್ಲಿರುವ ನೋಟುಗಳಲ್ಲಿ ಕೇವಲ ಶೇ. 10 ಕ್ಕಿಂತ ಹೆಚ್ಚು ಮತ್ತು ವಹಿವಾಟುಗಳಲ್ಲಿ ಅವುಗಳನ್ನು ವ್ಯಾಪಕವಾಗಿ ಬಳಸಲಾಗಿಲ್ಲ ಎಂದು ಹೇಳಿದರು.
ಸಾವಿರ ರೂ ಮುಖ ಬೆಲೆಯ ನೋಟಿನ ಮರು ಪರಿಚಯ ಇಲ್ಲ
ಅಂತೆಯೇ ಹೆಚ್ಚಿನ ಮೌಲ್ಯದ ನೋಟು ಚಲಾವಣೆ ಹಿಂತೆಗೆದುಕೊಳ್ಳುವ ನಿರ್ಧಾರ ಆರ್ಬಿಐ ನೀತಿಯ ಭಾಗವಾಗಿದ್ದು, 2016ರ ನೋಟು ಅಮಾನ್ಯೀಕರಣದ ನಂತರ 1 ಸಾವಿರ ಬೆಲೆಯ ನೋಟು ಮರು ಪರಿಚಯ ಮಾಡುವ ಉದ್ದೇಶ ಇಲ್ಲ. ಸಾಮಾನ್ಯ ನಗದು ಠೇವಣಿ ನಿಯಮ ಅನುಸರಿಸಬೇಕು ಮತ್ತು ಠೇವಣಿ ನಿರ್ಣಯಿಸುವುದು ಇತರ ಏಜೆನ್ಸಿಗಳಿಗೆ ಬಿಟ್ಟದ್ದು ಎಂದು ಹೇಳಿದ ಅವರು ಬೇಡಿಕೆಯ ಟ್ರೆಂಡ್ಗಳ ಆಧಾರದ ಮೇಲೆ ಹೆಚ್ಚಿನ ಬ್ಯಾಂಕ್ಗಳು ತಮ್ಮ ಎಟಿಎಂಗಳನ್ನು ಮಾರ್ಪಡಿಸಿವೆ ಮತ್ತು 2000 ರೂಪಾಯಿಗಳ ನೋಟುಗಳನ್ನು ಹೆಚ್ಚು ನೀಡುತ್ತಿಲ್ಲ ಹೀಗಾಗಿ ಹಿಂಪಡೆಯಲಾಗಿದೆ ಎಂದರು.
ನೋಟುಗಳ ಸಾಕಷ್ಟು ದಾಸ್ತಾನಿದೆ
ಬ್ಯಾಂಕ್ಗಳು ಮತ್ತು ಆರ್ಬಿಐನಲ್ಲಿ ಲಭ್ಯವಿರುವ ಇತರ ಮುಖಬೆಲೆಯ ನೋಟುಗಳ “ಸಾಕಷ್ಟು ಹೆಚ್ಚು” ದಾಸ್ತಾನು ಇದೆ. 2000ರೂ ನೋಟುಗಳ ಸಂಗ್ರಹವನ್ನು ಮರುಪೂರ್ಣ ಮಾಡಲು ಬಳಸಬಹುದು. ಇಲ್ಲಿಯವರೆಗೆ, ವ್ಯವಸ್ಥೆಯಲ್ಲಿನ ನಗದು ವ್ಯವಹಾರಕ್ಕೆ ಸಂಬಂಧಿಸಿದಂತೆ ಆರ್ಬಿಐ ವ್ಯವಸ್ಥೆಯಲ್ಲಿನ ಲಿಕ್ವಿಡಿಟಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಅಂಚೆ ಕಚೇರಿಗಳ ಮೂಲಕ ನೋಟು ಬದಲಾವಣೆ ಇಲ್ಲ
2000 ರೂ ಮುಖಬೆಲೆಯ ನೋಟುಗಳ ವಿನಿಮಯ ಸೌಲಭ್ಯವು ಬ್ಯಾಂಕ್ ಶಾಖೆಗಳಲ್ಲಿ ಮಾತ್ರ ಲಭ್ಯವಿರುತ್ತದೆ ಮತ್ತು ಅಂಚೆ ಕಚೇರಿಗಳ ಮೂಲಕ ಮಾಡಲಾಗುವುದಿಲ್ಲ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ. "ಬ್ಯಾಂಕ್ಗಳಲ್ಲಿ ಮಾತ್ರ ನೋಟು ವಿನಿಮಯ ಸೌಲಭ್ಯ ಲಭ್ಯವಿದೆ. 2000 ರೂಪಾಯಿ ನೋಟು ಕಾನೂನುಬದ್ಧ ಟೆಂಡರ್ ಆಗಿರುವುದರಿಂದ ಗ್ರಾಹಕರು ಠೇವಣಿ ಮಾಡಬಹುದು. ಸಾರ್ವಜನಿಕರು ಇಂದಿನಿಂದ ತಮ್ಮ 2000 ರೂಪಾಯಿಗಳನ್ನು ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿ ಮಾಡಲು ಪ್ರಾರಂಭಿಸಬಹುದು. ಯಾವುದೇ ಬ್ಯಾಂಕ್ನಲ್ಲಿ ರೂ 2000 ಬ್ಯಾಂಕ್ ನೋಟುಗಳನ್ನು ಇತರ ಮುಖಬೆಲೆಯ ನೋಟುಗಳಾಗಿ ವಿನಿಮಯ ಮಾಡಿಕೊಳ್ಳಬಹುದು. ಎಂದು ಆರ್ಬಿಐ ಹೇಳಿದೆ.
ಸೆಪ್ಟೆಂಬರ್ 30 ರಂದು 2000 ರೂಪಾಯಿ ನೋಟುಗಳ ವಿನಿಮಯದ ಅಂತಿಮ ದಿನಾಂಕದ ಕುರಿತು ಮಾತನಾಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್, ಜನರು ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಲು ದಿನಾಂಕವನ್ನು ನಿರ್ಧರಿಸಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ