

ನವದೆಹಲಿ: ಕೇಂದ್ರ ಸರ್ಕಾರ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆರ್ಥಿಕ ಸಹಾಯ ನೀಡುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು ಮುಂದಿನ 5 ವರ್ಷಗಳವರೆಗೆ, ಅಂದರೆ 2030-31ರ ಆರ್ಥಿಕ ವರ್ಷದವರೆಗೆ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು PM-KISAN ಯೋಜನೆ?
ಫೆಬ್ರವರಿ 24, 2019 ರಂದು ಪ್ರಾರಂಭವಾದ PM-KISAN ಯೋಜನೆ ಅಂದ್ರೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಕುಟುಂಬಗಳಿಗೆ ವರ್ಷಕ್ಕೆ ₹6,000 ಆದಾಯ ಅಂದ್ರೆ ತಲಾ ₹ 2,000 ರಂತೆ ಮೂರು ಸಮಾನ ಕಂತುಗಳಲ್ಲಿ ಪ್ರತಿ 4 ತಿಂಗಳಿಗೊಮ್ಮೆ ನೀಡಲಾಗುತ್ತದೆ.
ಮುಂದುವರೆದು, ಮೋದಿ ನೇತೃತ್ವದ ಕೇಂದ್ರ ಸರಕಾರವು ಮುಂದಿನ 5 ವರ್ಷಗಳ ಅವಧಿಗೆ (2026-27 ರಿಂದ 2030-31) ಈ ಯೋಜನೆಗಾಗಿ ₹3,15,614 ಕೋಟಿ ಭಾರಿ ಮೊತ್ತವನ್ನು ಮೀಸಲಿಟ್ಟಿದೆ. ಅದರಂತೆ, ಯೋಜನೆ ಆರಂಭವಾದಾಗಿನಿಂದ ಇದುವರೆಗೆ 23 ಕಂತುಗಳ ಮೂಲಕ ರೈತರ ಖಾತೆಗಳಿಗೆ ₹4.47 ಲಕ್ಷ ಕೋಟಿಗಿಂತಲೂ ಹೆಚ್ಚು ಹಣವನ್ನು ಯಶಸ್ವಿಯಾಗಿ ವರ್ಗಾಯಿಸಲಾಗಿದೆ. ಅದರಲ್ಲೂ, ಒಟ್ಟು ಫಲಾನುಭವಿಗಳಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಹಿಳಾ ರೈತರಿದ್ದು, ಅವರಿಗೆ ಇದುವರೆಗೆ ₹1.06 ಲಕ್ಷ ಕೋಟಿಗೂ ಅಧಿಕ ಹಣ ತಲುಪಿದೆ ಎಂದು ನೀತಿ ಆಯೋಗ ತಿಳಿಸಿದೆ.