

ನವದೆಹಲಿ: ಅಯೋಧ್ಯಾಯಲ್ಲಿ ಪ್ರಭು ಶ್ರೀರಾಮನ ಪ್ರತಿಷ್ಠಾಪನೆ ಆದನಂತರ ಒಂದಲ್ಲಾ ಒಂದು ಅಕ್ರಮ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಸ್ವಲ್ಪ ದಿನಗಳ ಹಿಂದೆ ರಾಮ ಮಂದಿರದ ದೇಣಿಗೆ ಸಂಗ್ರಹ ಮತ್ತು ಎಣಿಕೆ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಹಣ ಹಾಗೂ ಕಾಣಿಕೆಗಳ ಕಳ್ಳತನ ಹಾಗೂ ದುರ್ಬಳಕೆ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಜೊತೆಗೆ ಆ ಕುರಿತ ತನಿಕೆಯು ಜಾರಿಯಲ್ಲಿದೆ. ಇದರ ನಡುವೆಯೇ, ಶ್ರೀರಾಮ ಮಂದಿರದ ಪ್ರಸಾದದ ಹೆಸರಿನಲ್ಲಿ ಸಾಮಾನ್ಯ ಸಿಹಿತಿಂಡಿಗಳನ್ನು ಮಾರಾಟವಾದ ಕಾರಣ, ಇ-ಕಾಮರ್ಸ್ ದೈತ್ಯ ಅಮೆಜಾನ್ ಗೆ CCPA ಲಕ್ಷ ದಂಡ ವಿಧಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
ಜನವರಿ 2024 ರಲ್ಲಿ ಅಯೋಧ್ಯೆಯ ರಾಮಮಂದಿರ ಉದ್ಘಾಟನೆಯ (ಪ್ರಾಣ ಪ್ರತಿಷ್ಠಾಪನೆ) ಸಂದರ್ಭದಲ್ಲಿ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು, ಅಮೆಜಾನ್ ಪ್ಲಾಟ್ಫಾರ್ಮ್ನಲ್ಲಿ 'ಚಂದೂ ಟ್ರೇಡಿಂಗ್ ಕಂಪನಿ' ಎಂಬ ಮಾರಾಟಗಾರ ಸಂಸ್ಥೆಯು ತನ್ನ 'ಬಿಹಾರ್ ಬ್ರದರ್ಸ್' ಬ್ರ್ಯಾಂಡ್ ಅಡಿಯಲ್ಲಿ 4 ಬಗೆಯ ಸಾಮಾನ್ಯ ಸಿಹಿತಿಂಡಿಗಳನ್ನು (ಗೀ ಲಾಡು, ಖೋವಾ ಲಾಡು, ಬೂಂದಿ ಲಾಡು ಮತ್ತು ಹಸುವಿನ ಹಾಲಿನ ಪೇಡಾ) ಮಾರಾಟಕ್ಕಿಟ್ಟಿದದರ ವಿರುದ್ದ ಕೇಂದ್ರೀಯ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ದೂರು ನೀಡಿತ್ತು.
ಇನ್ನು, ಈ ತಿಂಡಿಗಳಿಗೆ ಶ್ರೀ ರಾಮ ಮಂದಿರ ಅಯೋಧ್ಯಾ ಪ್ರಸಾದ್ ಮತ್ತು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ಆಶೀರ್ವಾದಗಳು ಎಂಬ ಒಕ್ಕಣೆಯೊಂದಿಗೆ ದೇವರ ಚಿತ್ರಗಳನ್ನು ಬಳಸಿ ಜಾಹೀರಾತು ನೀಡಲಾಗಿತ್ತು. ಆದರೆ, ಈ ರೀತಿ ಪ್ರಸಾದದ ಹೆಸರಿನಲ್ಲಿ ಸಿಹಿತಿಂಡಿ ಮಾರಾಟ ಮಾಡಲು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಇದರ ನಡುವೆ, ಭಕ್ತರು ಅಮೆಜಾನ್ನಲ್ಲಿ ಇದು ನಿಜವಾಗಿಯೂ ಅಯೋಧ್ಯಾ ಮಂದಿರದಲ್ಲಿ ದೇವರಿಗೆ ನೈವೇದ್ಯ ಮಾಡಿ ಆಶೀರ್ವದಿಸಿದ 'ಪ್ರಸಾದ' ಇರಬಹುದು ಎಂದು ನಂಬಿ ಖರೀದಿಸಿದ್ದರು.
ಮುಂದುವರೆದು, ಜನವರಿ 2024 ರಲ್ಲಿ ಪ್ರಾಧಿಕಾರ ನೋಟಿಸ್ ನೀಡಿದ ನಂತರ ಅಮೆಜಾನ್ ಈ ಉತ್ಪನ್ನಗಳನ್ನು ತನ್ನ ಸೈಟ್ನಿಂದ ತೆಗೆದುಹಾಕಿತ್ತು. ಆದರೆ, ತಾನು ಕೇವಲ ಮಧ್ಯವರ್ತಿ ವೇದಿಕೆಯಾಗಿದ್ದು, ಮಾರಾಟಗಾರರ ಉತ್ಪನ್ನಗಳಿಗೆ ತಾನು ಜವಾಬ್ದಾರನಲ್ಲ ಎಂದು ಅಮೆಜಾನ್ ವಾದಿಸಿತ್ತು. ಈ ವಾದವನ್ನು ತಿರಸ್ಕರಿಸಿದ ಪ್ರಾಧಿಕಾರ, ಇಷ್ಟು ದೊಡ್ಡ ಸಂಸ್ಥೆಗೆ ದೇಶದ ಕಾನೂನಿನ ಅಡಿ ಜವಾಬ್ದಾರಿ ಇರುತ್ತದೆ ಎಂದು ಸ್ಪಷ್ಟಪಡಿಸಿ, ₹1 ಲಕ್ಷ ದಂಡ ವಿಧಿಸಿದೆ. ಇದರೊಂದಿಗೆ, ಭವಿಷ್ಯದಲ್ಲಿ 'ಪ್ರಸಾದ', 'ಮಹಾಪ್ರಸಾದ್' ಅಥವಾ 'ಭೋಗ್' ಎಂಬ ಹೆಸರಿನಲ್ಲಿ ಯಾವುದೇ ಧಾರ್ಮಿಕ ಉತ್ಪನ್ನಗಳನ್ನು ಮಾರಾಟ ಮಾಡುವ ಮುನ್ನ ಅಧಿಕೃತ ದಾಖಲೆಗಳನ್ನು ಪರಿಶೀಲಿಸಬೇಕು ಎಂದು ಅಮೆಜಾನ್ಗೆ ಸೂಚಿಸಲಾಗಿದೆ.