ಮುಂಬೈ: ನನ್ನೊಂದಿಗೆ ಮಾಡಿದ ಪ್ರಾಜೆಕ್ಟ್ಗಳೆಲ್ಲಾ ಅರ್ಧಕ್ಕೆ ನಿಂತು ಮೂಲೆ ಸೇರುವ ಕಾರಣ ಸಿನಿಮಾರಂಗದಲ್ಲಿ ನನ್ನನ್ನು ದುರಾದೃಷ್ಟದವಳು ಎಂದೇ ಹೇಳಲಾಗುತ್ತಿತ್ತು. ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ, ಬಾಲಿವುಡ್ ನಟಿ ವಿದ್ಯಾ ಬಾಲನ್.
ಸಿನಿಮಾರಂಗವೆಂಬುದು ಕೆಟ್ಟದ್ದು ಎಂಬುದು ನನ್ನ ಕುಟುಂಬದವರ ನಿಲುವು ಆಗಿತ್ತು. ಆಗ ನಾನು ನನಗೆ ಒಂದೇ ಒಂದು ಸಿನಿಮಾದಲ್ಲಿ ಅಭಿನಯಿಸಲು ಬಿಡಿ, ಅದಾದ ನಂತರ ನಾನೇ ಸಿನಿಮಾರಂಗದಿಂದ ಹೊರ ಬರುತ್ತೇನೆ ಎಂದಿದ್ದೆ.
ಹಾಗೆ ನಾನು ಮಲಯಾಳಂ ಸಿನಿಮಾವೊಂದರಲ್ಲಿ ನಟಿಸಲು ಒಪ್ಪಿಕೊಂಡೆ. ಆ ಸಿನಿಮಾ ಪೂರ್ತಿಯಾಗದೆ ಮೂಲೆ ಸೇರಿತು. ಇದಾದನಂತರ ಮೂರು ಸಿನಿಮಾಗಳಲ್ಲಿ ನಟಿಸಲು ಅವಕಾಶ ಸಿಕ್ಕಿದರೂ ಅವೆಲ್ಲವೂ ಅರ್ಧಕ್ಕೆ ನಿಂತು ಹೋಯಿತು. ಈ ಕಾರಣದಿಂದಾಗಿ ನನಗೆ ದುರಾದೃಷ್ಟದವಳು ಎಂಬ ಹಣೆಪಟ್ಟಿ ಬಂತು. ಸಿನಿಮಾರಂಗ ನನ್ನನ್ನು ದೂರವಿಟ್ಟಿತು.
ಆ ಕಷ್ಟದ ಸಮಯದಲ್ಲಿ ಯುಫೋರಿಯಾ (ಬ್ಯಾಂಡ್)ನಲ್ಲಿ ಹಾಡೊಂದರ ಶೂಟಿಂಗ್ ವೇಳೆ ನನಗೆ ಪ್ರದೀಪ್ ಸರ್ಕಾರ್ ( ಪರಿಣಿತಾ ಸಿನಿಮಾ ನಿರ್ದೇಶಕ) ಅವರ ಪರಿಚಯವಾಯಿತು. ಅವರು ನನಗೆ ಸಿನಿಮಾದಲ್ಲಿ ಅವಕಾಶ ನೀಡುತ್ತೇನೆ ಎಂದು ಹೇಳಿದಾಗ, ಎಷ್ಟೊಂದು ಜನ ಹೀಗೆ ಬಂದು ಹಾಗೇ ಹೋಗಿದ್ದಾರೆ ಎಂದು ಹೇಳಿದೆ. ಮೊದಲಿಗೆ ನನಗೆ ಅವರ ಮೇಲೆ ವಿಶ್ವಾಸ ಬರಲಿಲ್ಲ. ಕೊನೆಗೆ ನಾನು ಅವರೊಂದಿಗೆ ಪರಿಣಿತಾ ಸಿನಿಮಾ ಮಾಡಿದೆ.
ನಾನು ದೊಡ್ಡವಳಾಗುತ್ತಿದ್ದಂತೆ ನನಗೆ ನನ್ನ ಹೆಸರು ಹಳೆಯ ಹೆಸರು ಎಂದು ಅನಿಸುತ್ತಿತ್ತು. ನನ್ನ ಓರಗೆಯವರಲ್ಲಿ ಇಬ್ಬರಲ್ಲಿ ಒಬ್ಬರಿಗೆ ವಿದ್ಯಾ ಎಂಬ ಹೆಸರಿರುತ್ತಿತ್ತು. ಅದೇ ವೇಳೆ ನನ್ನ ತಂಗಿಯ ಹೆಸರು ಪ್ರಿಯಾ, ಆ ಹೆಸರು ನನಗೆ ತುಂಬಾ ಇಷ್ಟವಾಗಿತ್ತು. ಆಮೇಲೆ ನಾನು ನನಗೆ ಅಪ್ಪ ಅಮ್ಮ ಇಟ್ಟ ಹೆಸರನ್ನೇ ಇಷ್ಟ ಪಡ ತೊಡಗಿದೆ. ಒಂದ್ಸಾರಿ ಒಬ್ಬ ಹುಡುಗ ನನ್ನಲ್ಲಿ ವಿದ್ಯಾ ಎಂಬುದು ತುಂಬಾ ಹಳೇ ಜಗತ್ತಿನ ಹೆಸರು, ನೀನು ಆ ಜಗತ್ತಿನ ಸುಂದರಿ ಎಂದು ಹೇಳಿದ ನಂತರ ನಾನು ನನ್ನ ಹೆಸರನ್ನು ಮೆಚ್ಚಲು ತೊಡಗಿದೆ.
ನಾನು ಸಿನಿಮಾ ರಂಗಕ್ಕೆ ಬರುವಾಗ ತುಂಬಾನೇ ಸ್ವೇಚ್ಛೆಯಿಂದ ಕೂಡಿದ್ದೆ. ನಾನೇ ದೊಡ್ಡ ನಟಿ ಎಂಬ ಭ್ರಮೆ ನನ್ನಲ್ಲಿತ್ತು. ಪರಿಣಿತಾ ಸಿನಿಮಾ ಎಲ್ಲವನ್ನೂ ಕಲಿಸಿತು. ಒಂದು ಸಿನಿಮಾ ಪೂರ್ತಿಯಾಗಲು ಕಾಯುವ ಸಮಯ ಎಲ್ಲವನ್ನೂ ಕಲಿಸಿತು.
ಕಾಲ ಕಳೆದಂತೆ ಟೀಕೆಗಳು ಶುರುವಾಯಿತು. ನಾನು ಮಾಡಿರುವ ಮಾಡದೇ ಇರುವ ವಿಷಯಗಳೂ ಟೀಕೆಗೊಳಗಾದವು. ಆಗ ನಾನು ಗೊಂದಲಕ್ಕೊಳಗಾದೆ ಎಂದು ವಿದ್ಯಾ ಹೇಳಿದ್ದಾರೆ. ಪಣಜಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಇಕಾನಮಿಕ್ ಫೋರಂನಲ್ಲಿ ವಿದ್ಯಾಬಾಲನ್ ತಮ್ಮ ಅನುಭವಗಳನ್ನು ಈ ರೀತಿ ತೆರೆದಿಟ್ಟಿದ್ದಾರೆ.
Advertisement