ನವದೆಹಲಿ: ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟು ಮಾಡಿದ ಆಪಾದನೆ ಸಂಬಂಧ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವಿರುದ್ಧ ಎಫ್ಐಆರ್ ದಾಖಲು ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಕ್ರಿಮಿನಲ್ ದೂರನ್ನು ವಜಾಗೊಳಿಸಲಾಗಿದೆ.
ಪ್ರಕರಣ ಸಂಬಂಧ ಇಂದು ವಿಚಾರಣೆ ನಡೆಸಿದ ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ವಕೀಲ ಗೌರವ್ ಗುಲಟಿ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇನ್ನು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ಮುಂಬೈ ಪೊಲೀಸರು ನ್ಯಾಯಾಲಯಕ್ಕೆ ವರದಿ ನೀಡಿದ್ದು, ವರದಿಯಲ್ಲಿ ಈ ನಟರು ಉದ್ದೇಶ ಪೂರ್ವಕವಾಗಿ ಶೂ ಹಾಕಿಕೊಂಡು ನೈಜ ದೇವಾಲಯ ಪ್ರವೇಶ ಮಾಡಿಲ್ಲ. ಬದಲಿಗೆ ಬಿಗ್ ಬಾಸ್ ಸಲುವಾಗಿ ಹಾಕಿದ್ದ ಸೆಟ್ನಲ್ಲಿ ನಿರ್ಮಿಸಲಾಗಿದ್ದ ದೇವಾಲಯದ ಮಾದರಿಯೊಳಗಷ್ಟೇ ಪ್ರವೇಶಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಅವರಿಗೆ ಇರಲಿಲ್ಲ ಎಂದು ಪೊಲೀಸರು ತಮ್ಮ ವರದಿಯಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ನ್ಯಾಯಾಲಯ ವಕೀಲರ ಅರ್ಜಿಯನ್ನು ವಜಾಗೊಳಿಸಿದೆ ಎಂದು ತಿಳಿದುಬಂದಿದೆ.
ಕಲರ್ಸ್ ವಾಹಿನಿ ನಡೆಸುತ್ತಿದ್ದ ಬಿಗ್ ಬಾಸ್ ರಿಯಾಲಿಟಿ ಶೋ ಗಾಗಿ ನಿರ್ಮಿಸಲಾದ ಹಿಂದು ದೇವಾಲಯದ ಸೆಟ್ ಒಳಗೆ ಬಾಲಿವುಡ್ ಸ್ಟಾರ್ ನಟರಾದ ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಶೂಧರಿಸಿ ಪ್ರವೇಶಿಸಿದ್ದರು. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಿ ವಕೀಲ ಗೌರವ್ ಗುಲಟಿ ಎಂಬುವವರು ಅಧಿನಿಯಮ 295ಎ, 298 ಹಾಗೂ 34ರ ಅನ್ವಯ ಶಾರುಖ್ ಖಾನ್, ಸಲ್ಮಾನ್ ಖಾನ್, ಕಲರ್ಸ್ ವಾಹಿನಿಯ ಮುಖ್ಯಸ್ಥರು ಹಾಗೂ ಬಿಗ್ಬಾಸ್ 9ನೇ ಆವೃತ್ತಿಯ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.
Advertisement