ಬಾಲಿವುಡ್
ಬಿಜೆಪಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಬಾಲಿವುಡ್ ನಟ ಸಂಜಯ್ ದತ್
ಬಾಲಿವುಡ್ ನಟ ಸಂಜಯ್ ದತ್ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ, ಅದೂ ತನ್ನ ಬಿಡುಗಡೆಯನ್ನೇ ವಿರೋಧಿಸುತ್ತಿದ್ದ...
ಮುಂಬೈ: ಬಾಲಿವುಡ್ ನಟ ಸಂಜಯ್ ದತ್ ಅವರು ಜೈಲಿನಿಂದ ಬಿಡುಗಡೆಯಾದ ನಂತರ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ, ಅದೂ ತನ್ನ ಬಿಡುಗಡೆಯನ್ನೇ ವಿರೋಧಿಸುತ್ತಿದ್ದ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಲ್ಲದೆ ಬಿಜೆಪಿಯನ್ನು ಹಾಡಿ ಹೊಗಳಿದ್ದಾರೆ.
ಸಂಜಯ್ ದತ್ ಅವರು ಕಳೆದ ಫೆಬ್ರವರಿಯಲ್ಲಿ ಜೈಲಿನಿಂದ ಬಿಡುಗಡೆಯಾದ ನಂತರ ಸಾರ್ವಜನಿಕ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಇದೇ ಮೊದಲು. ಹೀಗಾಗಿ ಎಲ್ಲರ ಕಣ್ಣು ನಟನ ಮೇಲೆ ನೆಟ್ಟಿತ್ತು.
ಸಂಜಯ್ ದತ್ ಅವರು ಹಿಂದೆ ಪದೇಪದೆ ಪೆರೋಲ್ ಮೇಲೆ ಬಿಡುಗಡೆಯಾದಗಲ್ಲೆಲ್ಲ ಬಿಜೆಪಿ ನಾಯಕರಿಂದಲೇ ಟೀಕೆಗೆ ಗುರಿಯಾಗಿದ್ದರು. ಅವರ ಪೆರೋಲ್ ಅನ್ನು ವಿರೋಧಿಸಿದ್ದ ನಗರ ಬಿಜೆಪಿ ಅಧ್ಯಕ್ಷ ಆಶೀಶ್ ಶೆಲಾರ್ ಹಾಗೂ ಮೋಹಿತ್ ಖಾಂಬೋಜ್ ಆಯೋಜಿಸಿದ್ದ ಮಹಾರಾಷ್ಟ್ರ ದಿವಸ ಕಾರ್ಯಕ್ರಮದಲ್ಲಿ ಸಂಜಯ್ ದತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ಬಾಲಿವುಡ್ ನಟ ಸಂಜಯ್ ದತ್, ಮಹಾರಾಷ್ಟ್ರದಲ್ಲಿ ಬಿಜೆಪಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿ. ಮುಂಬರುವ ಚುನಾವಣೆಯಲ್ಲಿ ಇನ್ನಷ್ಟು ಸೀಟು ಗೆಲ್ಲುವಂತಾಗಲಿ ಎಂದು ಹಾರೈಸಿದರು.
ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಂಜಯ್ ದತ್ ಅವರು ಕಳೆದ ಫೆಬ್ರವರಿಯಲ್ಲಿ ಜೈಲಿನಿಂದ ಹೊರಬಂದಿದ್ದಾರೆ.