ನವದೆಹಲಿ: ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರ ಜೀವನ ಆಧಾರಿತ ಸಿನಿಮಾದ ಟ್ರೈಲರ್ ಬಿಡುಗಡೆಗೆ ಕೆಲವೇ ಗಂಟೆಗಳ ಮುನ್ನ ಚಿತ್ರದ ಮೂರು ಡೈಲಾಗ್ ಗಳಿಗೆ ಸೆನ್ಸಾರ್ ಮಂಡಳಿ ಬುಧವಾರ ಆಕ್ಷೇಪ ವ್ಯಕ್ಯಪಡಿಸಿದೆ.
ಚಿತ್ರದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರು ದಕ್ಷಿಣ ಭಾರತೀಯರ ಕುರಿತ ಮತ್ತು ಬಾಬ್ರಿ ಮಸೀದಿಗೆ ಸಂಬಂಧಿಸಿದ ಮೂರು ಡೈಲಾಗ್ ಗಳಿಗೆ ಕೇಂದ್ರೀಯ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ.
ಸೆನ್ಸಾರ್ ಮಂಡಳಿಯ ಸೂಚನೆಗಳನ್ನು ನಾವು ಪಾಲಿಸುತ್ತಿದ್ದೇವೆ. ಇದರಿಂದ ಟ್ರೈಲರ್ ಬಿಡುಗಡೆಗೆ ಯಾವುದೇ ತೊಂದರೆ ಇಲ್ಲ ಎಂದು ಠಾಕ್ರೆ ಸಿನಿಮಾಗೆ ಚಿತ್ರಕಥೆ ಬರೆದಿರುವ ಶಿವಸೇನೆ ರಾಜ್ಯಸಭಾ ಸದಸ್ಯ, ಶಿವಸೇನೆ ವಕ್ತಾರ ಸಂಜಯ್ ರಾವುತ್ ಅವರು ಹೇಳಿದ್ದಾರೆ.
ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರು ಠಾಕ್ರೆ ಪಾತ್ರದಲ್ಲಿ ಅಭಿನಯಿಸಿದ್ದು, ಈ ಚಿತ್ರದ ಟ್ರೈಲರ್ ಇಂದು ಮಧ್ಯಾಹ್ನ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ಮಂಡಳಿಯ ಆಕ್ಷೇಪದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ.
2019 ರ ಜನವರಿ 23ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಂಜಯ್ ರಾವುತ್ ಅವರು ಕಾರ್ನಿವಲ್ ಮೋಷನ್ ಪಿಕ್ಚರ್ಸ್ ಜೊತೆಗೂಡಿ ಚಿತ್ರದ ನಿರ್ಮಾಣವನ್ನೂ ಮಾಡಿದ್ದಾರೆ.