ಹೈದ್ರಾಬಾದ್ : ಜಾನ್ ಅಬ್ರಹಾಂ ಅವರ ಮುಂದಿನ ಬಾಲಿವುಡ್ ಸಿನಿಮಾ ಸತ್ಯ ಮೇವ ಜಯತೇ ಚಿತ್ರದ ವಿರುದ್ಧ ಹೈದ್ರಾಬಾದ್ ನಲ್ಲಿ ಶಿಯಾ ಮುಖಂಡರು ದೂರು ದಾಖಲಿಸಿದ್ದಾರೆ. ಸಿನಿಮಾದಲ್ಲಿನ ದೃಶ್ಯವೊಂದರಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದ ಪ್ರತಿಭಟನೆ ನಡೆಸಿ ಸ್ಥಳೀಯ ಪ್ರಾಂತೀಯ ಸೆನ್ಸಾರ್ ಮಂಡಳಿಯಲ್ಲಿ ದೂರು ಸಲ್ಲಿಸಿದ ಬಳಿಕ ದಾಬೀರ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಐಪಿಸಿ ಸೆಕ್ಷನ್ 295 ( ಎ) ( ಉದ್ದೇಶಪೂರ್ವಕ , ದುರುದ್ದೇಶಪೂರ್ವಕ ಕೃತ್ಯ, ಯಾವುದೇ ವರ್ಗದಿಂದ ಧರ್ಮ ಅಥವಾ ಧಾರ್ಮಿಕ ನಂಬಿಕೆಗೆ ಅಪಮಾನ ಅಥವಾ ಮತ್ತು ಸಿನಿಮಾಟೋಗ್ರಪಿ ಕಾಯ್ದೆಯಡಿಯಲ್ಲಿ ಪೊಲೀಸರು ಚಿತ್ರ ನಿರ್ಮಾಪಕರ ವಿರುದ್ಧ ಪ್ರಕರಣ ದಾಖಲಿಸಿಕೊಡಿದ್ದಾರೆ. ಆಗಸ್ಟ್ 15 ರಂದು ಚಿತ್ರ ಬಿಡುಗಡೆಗೆ ನಿರ್ಧರಿಸಲಾಗಿತ್ತು.
ಠಾಣೆಯ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರ ಮುಖಂಡ ಸೈಯದ್ ಆಲಿ ಜಪ್ರಿ, ಜೂನ್ 28 ರಂದು ಸತ್ಯ ಮೇವ ಜಯತೇ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಅಂದೇ ದೂರು ಸಲ್ಲಿಸಲಾಗಿತ್ತು. ಒಂದು ದೃಶ್ಯದಲ್ಲಿ ಮೊಹರಾಂ ಹಬ್ಬವನ್ನು ಚಿತ್ರೀಕರಿಸಲಾಗಿದ್ದು, ಅಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ಚಿತ್ರೀಕರಿಸಲಾಗಿದೆ ಎಂದು ತಿಳಿಸಿದರು.
ಪ್ರತ್ಯೇಕ್ಷ , ಪರೋಕ್ಷವಾಗಿ ಹಲವು ಸಿನಿಮಾಗಳಲ್ಲಿ ಶಿಯಾ ಸಮುದಾಯದ ಭಾವನೆಗೆ ಧಕ್ಕೆ ತರುವಂತೆ ತೋರಿಸಲಾಗುತ್ತಿದೆ. ಸ್ಥಳೀಯ ಸೆನ್ಸಾರ್ ಮಂಡಳಿಯಲ್ಲಿ ದೂರು ದಾಖಲಿಸಿದ್ದು, ಅವರು ಮುಂಬೈಯಲ್ಲಿರುವ ಕೇಂದ್ರೀಯ ಸೆನ್ಸಾರ್ ಮಂಡಳಿಗೆ ವರ್ಗಾಯಿಸುವುದಾಗಿ ಭರವಸೆ ನೀಡಿದ್ದಾರೆ . ಟ್ರೈಲರ್ ಹಾಗೂ ಸಿನಿಮಾದಲ್ಲಿ ಆ ದೃಶ್ಯವನ್ನು ತೆಗೆದುಹಾಕದಿದ್ದರೆ ಹೈದ್ರಾಬಾದ್ ಮಾತ್ರವಲ್ಲ ದೇಶಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಮಿಲಾಪ್ ಮಿಲನ್ ಜಾವೇರಿ ಈ ಚಿತ್ರದ ಕಥೆ ಬರೆದು ನಿರ್ದೇಶಿಸುತ್ತಿದ್ದು, ಅಮೃತಾ ಖನ್ವಿಲ್ ಕರ್ , ಅಶಿ ಶರ್ಮಾ ಅವರೊಂದಿಗೆ ಜಾನ್ ಅಬ್ರಹಾಂ ಹಾಗೂ ಮನೋಜ್ ವಾಜ್ ಪೇಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Advertisement