ಬೆಂಗಳೂರು: 2008ರಲ್ಲಿ ಚಿತ್ರೀಕರಣ ಸೆಟ್ ನಲ್ಲಿ ತಮ್ಮ ಮೇಲೆ ಬಾಲಿವುಡ್ ನಟ ನಾನಾ ಪಾಟೇಕರ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ನಟಿ, ಮಾಜಿ ಸುಂದರಿ ತನುಶ್ರೀ ದತ್ತಾ, ಮಹಿಳೆಯರು ತಮಗಾಗುವ ಅನ್ಯಾಯದ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮುಕ್ತವಾಗಿ ಮಾತನಾಡಿದರೆ ಮಹಿಳೆಯ ಬಗ್ಗೆ ಸಮಾಜದಲ್ಲಿ ಕೆಟ್ಟದಾಗಿ ಮಾತನಾಡುತ್ತಾರೆ, ಬೆದರಿಕೆ ಬರುತ್ತದೆ, ಕಾನೂನು ಕ್ರಮ ತೆಗೆದುಕೊಳ್ಳಲು ಕೂಡ ಮುಂದಾಗುತ್ತಾರೆ. ಇವೆಲ್ಲಾ ಮಹಿಳೆಯರು ತಮಗಾದ ಅನುಭವವನ್ನು ಹೇಳಿಕೊಳ್ಳದಂತೆ ಬೆದರಿಸುವ ತಂತ್ರಗಳಾಗಿವೆ ಎಂದು ತನುಶ್ರೀ ದತ್ತಾ ಹೇಳಿದ್ದಾರೆ.
ಅವರು ನಿನ್ನೆ ಬೆಂಗಳೂರಿನಲ್ಲಿ 'ವಿ ದ ಮುಮೆನ್' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
2008ರಲ್ಲಿ ಹಾರ್ನ್ ಓಕೆ ಪ್ಲೀಸ್ ಎಂಬ ಸಿನಿಮಾದ ಚಿತ್ರೀಕರಣ ಸೆಟ್ ನಲ್ಲಿ ಕಿರುಕುಳ ಎದುರಿಸಿದ ಸಂದರ್ಭವನ್ನು ನೆನಪಿಸಿಕೊಂಡ ಅವರು, ಈ ವಿಷಯವನ್ನು ಸಾರ್ವಜನಿಕವಾಗಿ ಹೇಳಿದ್ದಕ್ಕಾಗಿ ನಾನಾ ಪಾಟೇಕರ್ ಮತ್ತು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಇಬ್ಬರೂ ಲೀಗಲ್ ನೊಟೀಸ್ ಕಳುಹಿಸುವ ಮೂಲಕ ತಮನ್ನ ಹೆದರಿಸಿದರು. ಈ ಘಟನೆ ತಮ್ಮ ಬದುಕಿನಲ್ಲಿ ಎಷ್ಟು ಆಘಾತ ತಂದಿತ್ತೆಂದರೆ ಚಿತ್ರೀಕರಣ ಸೆಟ್ ಗೆ ಹೋಗಲು ಭಯ ಆಗುತ್ತಿತ್ತು, ನನ್ನ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದೆ. ಕೊನೆಗೆ ಈ ಚಿತ್ರೋದ್ಯಮವನ್ನೇ ಬಿಟ್ಟು ಹೋದೆ, ಮತ್ತೆ ಅದರಿಂದ ಹೊರಬಂದು ಧೈರ್ಯವಾಗಿ ಮಾತನಾಡಲು 10 ವರ್ಷ ಹಿಡಿಯಿತು ಎನ್ನುತ್ತಾರೆ ತನುಶ್ರೀ.
ಹೆಸರಿಗಾಗಿ, ಪ್ರಚಾರ ಗಿಟ್ಟಿಸಿಕೊಳ್ಳಲು ನಾನು ಈ ರೀತಿ ಆರೋಪ ಮಾಡುತ್ತಿದ್ದೇನೆ ಎಂದು ಹಲವರು ಬೈಯುತ್ತಿದ್ದಾರೆ. 2008ರಲ್ಲಿ ಈ ಘಟನೆ ನಡೆದ ಕೂಡಲೇ ನಾನು ದೂರು ಸಲ್ಲಿಸಿದ್ದೆ. ನನಗೆ ಅಷ್ಟಕ್ಕೂ ಪ್ರಚಾರ ಗಿಟ್ಟಿಸಿಕೊಳ್ಳಬೇಕೆಂದಿದ್ದರೆ ನಾನು ಹಾಡಿನ ಚಿತ್ರೀಕರಣದಲ್ಲಿ ಭಾಗಿಯಾಗಿ ನಂತರ ವೇದಿಕೆ ಮೇಲೆ ಕೂಡ ಡ್ಯಾನ್ಸ್ ಮಾಡುತ್ತಿದ್ದೆ. ಆದರೆ ನನಗೆ ಸರಿಯಲ್ಲ ಎಂದು ಕಂಡು ನಾನು ಚಿತ್ರದಿಂದ ಹೊರಬಂದೆ ಎನ್ನುತ್ತಾರೆ,
ಭಾರತೀಯ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ಇಂದು ಜನಪ್ರಿಯವಾಗಿರುವ ಮಿ ಟೂ ಅಭಿಯಾನದ ಹಿನ್ನಲೆಯಲ್ಲಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಹಿಳಾ ಪತ್ರಕರ್ತರಾದ ಬರ್ಖಾ ದತ್ ಮತ್ತು ಸಂಧ್ಯಾ ಮೆನನ್ ಜೊತೆ ಮಾತನಾಡುತ್ತಿದ್ದರು.
ಇತ್ತೀಚೆಗೆ ತಮಗಾದ ಲೈಂಗಿಕ ಕಿರುಕುಳ ಪ್ರಕರಣಗಳನ್ನು ಅನೇಕ ಕ್ಷೇತ್ರಗಳಲ್ಲಿ ಮಹಿಳೆಯರು ಹೇಳಿಕೊಳ್ಳುತ್ತಿರುವುದು ನೋಡಿದರೆ ಆಘಾತವಾಗುತ್ತದೆ. ನನಗೆ ಕೂಡ ಇಂತಹ ಅನುಭವವಾಗಿತ್ತು ಮತ್ತು ಅದನ್ನು ಹೇಳಿಕೊಳ್ಳಲು ನಿರ್ಧರಿಸಿದೆ. ಇಂದಿನ ಮಹಿಳೆಯರು ಮುಖ್ಯವಾಗಿ ಯುವತಿಯರು ಈ ಬಗ್ಗೆ ಧೈರ್ಯವಾಗಿ, ಮುಕ್ತವಾಗಿ ಹೇಳಿಕೊಳ್ಳಬೇಕು ಎಂದರು.
Advertisement