ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜ್ಪೂತ್ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡ ಬೆನ್ನಲ್ಲೆ ಪ್ರಮುಖ ವ್ಯಕ್ತಿಯೊಬ್ಬರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.
ಮೃತ ಬಾಲಿವುಡ್ ನಟನ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ತರಲಾಗಿತ್ತು. ಈ ವೇಳೆಯಲ್ಲಿ ಸುಶಾಂತ್ ಸಿಂಗ್ ರಜ್ಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ಅಪರಾಧಿಯಂತೆ ವರ್ತಿಸುತ್ತಿದ್ದರು, ಸುಶಾಂತ್ ಪಾರ್ಥಿವ ಶರೀರದ ಮೇಲೆ ಕೈಯ್ಯಿಟ್ಟು ಕ್ಷಮೆ ಕೇಳುತ್ತಿದ್ದರು ಎಂದು ಆಸ್ಪತ್ರೆಯಲ್ಲೇ ಇದ್ದ ಕರಣಿ ಸೇನಾದ ಸದಸ್ಯನೋರ್ವ ಹೇಳಿಕೆ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆದ ಬಳಿಕ ರಿಯಾ ಚಕ್ರವರ್ತಿ ಪಾರ್ಥಿವ ಶರೀರವನ್ನು ನೋಡಲು ಮನವಿ ಮಾಡಿದ್ದರು, ನಾನೇ ಆಸ್ಪತ್ರೆ ಸಿಬ್ಬಂದಿಗಳಿಗೆ ಮನವಿ ಮಾಡಿ ಪಾರ್ಥಿವ ಶರೀರವನ್ನು ನೋಡಲು ಅವಕಾಶ ಸಿಗುವಂತೆ ಮಾಡಿದೆ. ಪಾರ್ಥಿವ ಶರೀರವನ್ನು ನೋಡುತ್ತಿದ್ದಂತೆಯೇ ರಿಯಾ ಚಕ್ರವರ್ತಿ ಆತನ ಎದೆಯ ಮೇಲೆ ಕೈಯ್ಯಿಟ್ಟು ಕ್ಷಮಿಸು ಬಾಬು ಎಂದು ಹೇಳುತ್ತಿದ್ದರು. ಅಪರಾಧಿಯಂತೆ ವರ್ತಿಸುತ್ತಿದ್ದರು ಎಂದು ಸುರ್ಜೀತ್ ಸಿಂಗ್ ರಾಥೋಡ್ ಹೇಳಿದ್ದಾರೆ.
ಸಿಬಿಐ ತಮ್ಮನ್ನು ತನಿಖೆಗೆ ಹಾಜರಾಗುವಂತೆ ಕೇಳಿದೆ. ಸಂತೋಷದಿಂದ ವಿಚಾರಣೆಗೆ ಹಾಜರಾಗುತ್ತೇನೆ ಎಂದು ರಾಥೋಡ್ ಹೇಳಿದ್ದಾರೆ.
Advertisement