ಹೈದರಾಬಾದ್: ಭಾರತೀಯ ಸಿನಿಮಾಗಳನ್ನು ಒಂದು ಉದ್ಯಮ ಎಂದು ಪರಿಗಣಿಸಿ ವರ್ಗೀಕರಿಸಬೇಡಿ ಎಂದು ಬಾಲಿವುಡ್ ನ ಖ್ಯಾತ ಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಒತ್ತಾಯಿಸಿದ್ದಾರೆ.
ರಣಬೀರ್ ಕಪೂರ್-ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಸಂಬಂಧ ನಿನ್ನೆ ಹೈದರಾಬಾದ್ ನಲ್ಲಿ ನಡೆದ ಚಿತ್ರದ ಪ್ರಚಾರಾರ್ಥ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಚಿತ್ರಗಳನ್ನು ಒಂದು ಭಾರತೀಯ ಚಿತ್ರೋದ್ಯಮ ಎಂದು ಪರಿಗಣಿಸಬೇಕೆ ಹೊರತು ಬಾಲಿವುಡ್, ಟಾಲಿವುಡ್ ಎಂದು ವಿಂಗಡಿಸಿ ನೋಡಬಾರದು. ನಾವು ನಮ್ಮ ಚಿತ್ರಗಳ ಮೂಲಕ ಇಡೀ ಭಾರತವನ್ನು ತಲುಪಲು ಬಯಸುತ್ತೇವೆ. ಎಸ್ ಎಸ್ ರಾಜಮೌಳಿಯವರು ಹೇಳಿದಂತೆ ಇದು ಭಾರತೀಯ ಚಲನಚಿತ್ರ ಉದ್ಯಮ. ಅದರಿಂದಾಚೆಗೆ ಇದನ್ನು ಬೇರೆ ರೀತಿ ವರ್ಗೀಕರಿಸಿ ನೋಡುವುದು ಬೇಡ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಎಂದು ಹೆಸರು ಕೊಡುತ್ತೇವೆ. ಇನ್ನು ಮುಂದೆ ಈ ವುಡ್ ಗಳಿಂದ ಹೊರಬರಬೇಕು, ನಾವೆಲ್ಲರೂ ಒಂದು ಭಾರತೀಯ ಚಲನಚಿತ್ರದ ಭಾಗವಾಗಿದ್ದೇವೆ. ಪ್ರತಿಯೊಂದು ಚಿತ್ರವೂ ಭಾರತೀಯ ಸಿನಿಮಾರಂಗಕ್ಕೆ ಸೇರಿದ್ದು ಎಂದು ಒತ್ತಿ ಹೇಳಿದರು.
ಕಳೆದ ಏಪ್ರಿಲ್ ನಲ್ಲಿ ಕೆಜಿಎಫ್ 2 ಬಿಡುಗಡೆ ವೇಳೆ ನಟ ಯಶ್ ಕೂಡ ಭಾರತೀಯ ಚಿತ್ರಗಳನ್ನು ಉಪ ವರ್ಗೀಕರಿಸುವುದನ್ನು ನಿಲ್ಲಿಸಬೇಕೆಂದು ಕೇಳಿಕೊಂಡಿದ್ದರು.
ಈಗ ಸಿನಿಮಾವೆಂದರೆ ಅದು ಭಾರತೀಯ ಚಿತ್ರರಂಗದ ಸಿನಿಮಾ. ಇಲ್ಲಿ ಹಲವು ಉಪ ವರ್ಗಗಗಳಿಲ್ಲ. ಜನರು ಎಲ್ಲಾ ಭಾಷೆಯ ಚಿತ್ರಗಳನ್ನು ನೋಡುತ್ತಾರೆ. ಇಂದು ಭಾರತೀಯ ಚಿತ್ರರಂಗ ಬದಲಾಗಿದೆ. ಅದಕ್ಕೆ ತಕ್ಕಂತೆ ನಾವು ಬದಲಾಗಬೇಕು. ನಾವು ಬದಲಾಗಿರದಿದ್ದರೆ ಜನರು ಇಷ್ಟೊಂದು ದೊಡ್ಡ ಮಟ್ಟದಲ್ಲಿ ನಮ್ಮ ಚಿತ್ರವನ್ನು ಒಪ್ಪಿಕೊಳ್ಳುತ್ತಿರಲಿಲ್ಲ ಎಂದು ತಮ್ಮ ಕೆಜಿಎಫ್ ಚಿತ್ರದ ಹಾಗೂ ರಾಜಮೌಳಿಯವರ ಆರ್ ಆರ್ ಆರ್ ಚಿತ್ರದ ಯಶಸ್ಸಿನ ಬಗ್ಗೆ ನಟ ಯಶ್ ಮಾತನಾಡಿದ್ದರು.
Advertisement