ಇಂದು ನಡೆಯಬೇಕಿದ್ದ ಬಾಲಿವುಡ್ ಕ್ಯೂಟ್ ಜೋಡಿ ಸಿದ್ಧಾರ್ಥ್ ಮಲ್ಹೋತ್ರ-ಕಿಯಾರಾ ಅಡ್ವಾಣಿಯವರ ವಿವಾಹವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಜೋಡಿಯ ವಿವಾಹ ಇಂದು ಜೈಸಲ್ಮೇರ್ನ ಸೂರ್ಯಗಢ ಪ್ಯಾಲೇಸ್ನಲ್ಲಿ ನಡೆಯಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿವಾಹವನ್ನು ನಾಳೆಗೆ ಮುಂದೂಡಿಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಅದ್ದೂರಿ ವಿವಾಹ ಕಾರ್ಯಕ್ರಮಕ್ಕೆ ಬಾಲಿವುಡ್'ನ ದೊಡ್ಡ ಬಳಗವೇ ಬರುತ್ತಿದ್ದು, 65 ಎಕರೆ ವಿಸ್ತೀರ್ಣದಲ್ಲಿರುವ ಹೋಟೆಲ್ನಲ್ಲಿ ಬಿಗಿ ಭದ್ರತೆಯನ್ನು ನಿಯೋಜನೆಗೊಳಿಸಲಾಗಿದೆ. ಹೋಟೆಲ್ನಿಂದ ಮಾಧ್ಯಮದವರನ್ನು ದೂರವಿಡಲು ನಿರ್ಧರಿಸಿದ್ದು, ವಿವಾಹ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ. ಮದುವೆಯ ಫೋಟೋಗಳು ಸೋರಿಕೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಈಗಾಗಲೇ ಆಮಂತ್ರಿತರಿಗೆ ಮನವಿ ಮಾಡಲಾಗಿದ್ದು, ಮೂರು ಏಜೆನ್ಸಿಗಳಿಗೆ ಭದ್ರತೆಯ ಕರ್ತವ್ಯ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಸೂರ್ಯಗಢ ಪ್ಯಾಲೇಸ್ ಭಾರತದ ಪ್ರಮುಖ ವಿವಾಹ ಸ್ಥಳಗಳಲ್ಲಿ ಒಂದಾಗಿದ್ದು, ಇಲ್ಲಿನ ಸೌಂದರ್ಯ ಮತ್ತು ಪ್ರಶಾಂತ ವಾತಾವರಣದಿಂದಾಗಿ ಜೋಡಿಗಳು ಸೂರ್ಯಗಢವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಸುಮಾರು 10 ಕಿಮೀ ಆಸುಪಾಸಿನಲ್ಲಿ ಯಾವುದೇ ಜನವಸತಿ ಇಲ್ಲ. 65 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಈ ಪ್ಯಾಲೇಸ್ ರಾತ್ರಿ ವೇಳೆ ಝಗಮಗಿಸುತ್ತಿದೆ. ಗೋಡೆಗಳ ಮೇಲೆ ಅತ್ಯುತ್ತಮವಾದ ಸಾಂಪ್ರದಾಯಿಕ ಕೆತ್ತನೆಗಳಿವೆ. ಇಡೀ ಹೋಟೆಲ್ಗೆ ರಜಪೂತರ ಸಂಪ್ರದಾಯವನ್ನು ತುಂಬಲಾಗಿದೆ. ಪ್ಯಾಲೇಸ್ ಸುತ್ತಲೂ ಬಯಲು ಸ್ಥಳ, ಉದ್ಯಾನಗಳು ಇನ್ನಷ್ಟು ಕಳೆ ನೀಡುತ್ತವೆ.
ಮದುವೆ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿದ್ದು, ಸಿದ್ಧಾರ್ಥ್ ಮತ್ತು ಕಿಯಾರಾ ಪ್ರತ್ಯೇಕವಾಗಿ ಮದುವೆಯ ತಾಣ ಸೂರ್ಯಗಢ ಪ್ಯಾಲೇಸ್ ತಲುಪಿದ್ದಾರೆ.
ಕಿಯಾರಾ ಅವರು ತಾಯಿ ಜೆನೆವಿವ್ ಜಾಫ್ರಿ, ತಂದೆ ಜೈ ಜಗದೀಪ್ ಅಡ್ವಾಣಿ, ಅಜ್ಜಿ ಮತ್ತು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರೊಂದಿಗೆ ಇಂದು ಬೆಳಗ್ಗೆ ಪ್ಯಾಲೆಸ್'ಗೆ ಆಗಮಿಸಿದ್ದರೆ, ನಟ ಸಿದ್ದಾರ್ಥ್ ಮಲ್ಹೋತ್ರಾ ಕುಟುಂಬ ಸಮೇತವಾಗಿ ದೆಹಲಿಯಿಂದ ನಿನ್ನೆ ರಾತ್ರಿಯೇ ಪ್ಯಾಲೆಸ್'ಗೆ ಬಂದಿಳಿದಿದ್ದಾರೆಂದು ತಿಳಿದುಬಂದಿದೆ.
Advertisement