
ಮುಂಬೈ: ಖ್ಯಾತ ಬಾಲಿವುಡ್ ನಟ ಅನುಪಮ್ ಖೇರ್ ಮತ್ತು ನಟಿ ಕಾಜೋಲ್ ದೇವಗನ್ ಅವರಿಗೆ ಈ ವರ್ಷದ ಮಹಾರಾಷ್ಟ್ರ ಸರ್ಕಾರದ ಪ್ರತಿಷ್ಠಿತ ರಾಜ್ ಕಪೂರ್ ಚಲನಚಿತ್ರ ಪ್ರಶಸ್ತಿ ನೀಡಲಾಗುತ್ತಿದೆ ಎಂದು ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೆಲಾರ್ ಅವರು ಗುರುವಾರ ಪ್ರಕಟಿಸಿದ್ದಾರೆ.
ಖೇರ್ ಅವರನ್ನು ರಾಜ್ ಕಪೂರ್ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಕಾಜೋಲ್ ಅವರನ್ನು ರಾಜ್ ಕಪೂರ್ ವಿಶೇಷ ಕೊಡುಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರಶಸ್ತಿಗಳು ಕ್ರಮವಾಗಿ 10 ಲಕ್ಷ ಮತ್ತು 6 ಲಕ್ಷ ರೂ. ನಗದು ಬಹುಮಾನ ಒಳಗೊಂಡಿವೆ.
ಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಮಹೇಶ್ ಮಂಜ್ರೇಕರ್ ಅವರಿಗೆ ಚಿತ್ರಪತಿ ವಿ ಶಾಂತಾರಾಮ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುವುದು. ಇದು 10 ಲಕ್ಷ ರೂ. ನಗದು ಬಹುಮಾನ, ಸ್ಮರಣಿಕೆ, ಪ್ರಶಂಸಾಪತ್ರ ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಇನ್ನು ನಟಿ ಮುಕ್ತಾ ಬಾರ್ವೆ ಅವರಿಗೆ ಚಿತ್ರಪತಿ ವಿ ಶಾಂತಾರಾಮ್ ವಿಶೇಷ ಕೊಡುಗೆ ಪ್ರಶಸ್ತಿ ನೀಡಲಾಗುವುದು. ಇದು 6 ಲಕ್ಷ ರೂ. ನಗದು ಬಹುಮಾನ, ಸ್ಮರಣಿಕೆ, ಪ್ರಶಂಸಾಪತ್ರ ಮತ್ತು ಬೆಳ್ಳಿ ಪದಕವನ್ನು ಒಳಗೊಂಡಿದೆ.
ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ 1993 ರಲ್ಲಿ ಸ್ಥಾಪಿಸಲಾದ ಲತಾ ಮಂಗೇಶ್ಕರ್ ಪ್ರಶಸ್ತಿಯನ್ನು ಈ ವರ್ಷ ಹಿರಿಯ ಮರಾಠಿ ಗಜಲ್ ಗಾಯಕ ಭೀಮರಾವ್ ಪಾಂಚಾಲೆ ಅವರಿಗೆ ನೀಡಲಾಗುವುದು. ಈ ಪ್ರಶಸ್ತಿ ಸಹ 10 ಲಕ್ಷ ರೂಪಾಯಿ ನಗದು, ಸ್ಮರಣಿಕೆ, ಪ್ರಶಸ್ತಿ ಪತ್ರ ಒಳಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 25 ರಂದು ಇಲ್ಲಿನ ಎನ್ಎಸ್ಸಿಐ ಡೋಮ್ನಲ್ಲಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
Advertisement