
ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚೂರಿ ಇರಿತ ಪ್ರಕರಣ ಇತ್ತೀಚಿನ ದಿನಗಳಲ್ಲಿ ಚರ್ಚೆಯ ವಿಷಯವಾಗಿದೆ. ಜನವರಿ 17ರಂದು ಬಾಲಿವುಡ್ ನಟನ ಮುಂಬೈ ನಿವಾಸಕ್ಕೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ನಟನಿಗೆ ಚೂರಿ ಇರಿದಿದ್ದನು. ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ನಂತರ ನಟ ಪ್ರಸ್ತುತ ಐಸಿಯುನಲ್ಲಿದ್ದಾರೆ. ಮತ್ತೊಂದೆಡೆ, ಮುಂಬೈ ಪೊಲೀಸರು ಶಂಕಿತ ಆರೋಪಿಯನ್ನು ಬಂಧಿಸಲು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಿಂದಲೂ ಆತನ ಗುರುತು ಪತ್ತೆಯಾಗಿದೆ. ಈಗ ಈ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ.
ಮುಂಬೈ ಪೊಲೀಸರು ಮಧ್ಯಪ್ರದೇಶದಲ್ಲಿ ಶಂಕಿತನನ್ನು ಬಂಧಿಸಿದ್ದಾರೆ. ಸೈಫ್ ಅಲಿ ಖಾನ್ ಚಾಕು ಇರಿತ ಪ್ರಕರಣದಲ್ಲಿ ಆತನ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುಗುತ್ತದೆ. ಮತ್ತೊಂದೆಡೆ, ಸೈಫ್ ಅವರ ಬಾಂದ್ರಾ ನಿವಾಸ ಸತ್ಗುರು ಶರಣ್ ಅಪಾರ್ಟ್ಮೆಂಟ್ನ ಸಿಸಿಟಿವಿ ದೃಶ್ಯಾವಳಿಗಳು ಸಹ ವೈರಲ್ ಆಗಿವೆ. ಕ್ಲಿಪ್ನಲ್ಲಿ, ಶಂಕಿತ ಆರೋಪಿಯು ಮೆಟ್ಟಿಲುಗಳ ಮೂಲಕ ನಟನ ಮನೆಯಿಂದ ಹೊರಹೋಗುತ್ತಿರುವುದು ಕಾಣಬಹುದು. ಬಾಂದ್ರಾ ರೈಲು ನಿಲ್ದಾಣದ ಸಿಸಿಟಿವಿಯಲ್ಲೂ ಅವನು ಕಾಣಿಸಿಕೊಂಡಿದ್ದು ಪ್ರಸ್ತುತ, ಮುಂಬೈ ಪೊಲೀಸರು ಆತನ ಪತ್ತೆಗೆ ಹುಡುಕಾಟ ನಡೆಸಿದ್ದಾರೆ.
ಸೈಫ್ ಅವರ ಪತ್ನಿ ಮತ್ತು ನಟಿ ಕರೀನಾ ಕಪೂರ್ ಖಾನ್ ಶುಕ್ರವಾರ ರಾತ್ರಿ ಅವರ ಹೇಳಿಕೆಯನ್ನು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಅವರ ಸಿಬ್ಬಂದಿ ಮತ್ತು ಮನೆ ಸಹಾಯಕಿ ಸೇರಿದಂತೆ 15 ಕ್ಕೂ ಹೆಚ್ಚು ಜನರನ್ನು ವಿಚಾರಣೆ ನಡೆಸಿದ್ದಾರೆ.
ಮುಂಬೈ ಆಸ್ಪತ್ರೆಯ ವೈದ್ಯರು, ನಟನಿಗೆ ನಿರಂತರವಾಗಿ ಹಲವಾರು ಬಾರಿ ಇರಿತ ಉಂಟಾಗಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಸೈಫ್ ಅವರ ದೇಹದ ಹಲವು ಭಾಗಗಳಲ್ಲಿ ಆಳವಾದ ಗಾಯಗಳಾಗಿವೆ. ಅಲ್ಲದೆ, ಚಾಕುವಿನ ಮುರಿದ ಭಾಗವು ಸೈಫ್ ದೇಹದಲ್ಲಿ ಸಿಲುಕಿಕೊಂಡಿದ್ದು, ಶಸ್ತ್ರಚಿಕಿತ್ಸೆಯ ನಂತರ ಅದನ್ನು ಹೊರತೆಗೆಯಲಾಯಿತು ಎಂದು ಹೇಳಿದರು.
Advertisement