

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಸುಪ್ರೀಂ ಕೋರ್ಟ್ನ 2019ರ ಅಯೋಧ್ಯೆಯ ರಾಮ ಮಂದಿರ ತೀರ್ಪಿನ ನಂತರ ತಮಗೆ 'ತೀವ್ರ ಮುಜುಗರ' ಉಂಟಾಗಿತ್ತು ಎಂದು ಹೇಳಿದ್ದಾರೆ.
ಅಯೋಧ್ಯೆಯ ರಾಮ ಜನ್ಮಭೂಮಿ ತೀರ್ಪು ಪ್ರಕಟವಾದ ನಂತರ, ಆಮೀರ್ ಖಾನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ಸೇರಿದಂತೆ ತಮ್ಮ ಮುಸ್ಲಿಂ ಸ್ನೇಹಿತರಲ್ಲಿ 'ಕ್ಷಮೆ ಕೇಳಿದ್ದಾಗಿ' ನಟಿ ಸ್ವರಾ ಭಾಸ್ಕರ್ ಅವರು ತಿಳಿಸಿದ್ದಾರೆ. ಅಲ್ಲದೆ ಈ ತೀರ್ಪಿನಿಂದಾಗಿ ಹಿಂದೂವಾಗಿ ತಮಗೆ ಅಸಹ್ಯವಾಗಿತ್ತು ಎಂದು ಹೇಳಿದ್ದಾರೆ.
‘ದಿ ಮಿಡ್ನೈಟ್ ಅವರ್’ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ಸ್ವರಾ ಭಾಸ್ಕರ್, ‘ರಾಮ ಜನ್ಮಭೂಮಿ ತೀರ್ಪು ಬಂದಾಗ ನನಗೆ ತುಂಬಾ ಬೇಸರವಾಗಿತ್ತು. ಈ ದೇಶ ಏನಾಗುತ್ತಿದೆ ಮತ್ತು ಇದು ಎಂತಹ ತೀರ್ಪು ಎಂದು ಆಲೋಚಿಸಿದೆ. ನ್ಯಾಯಾಲಯದ ಈ ನಿರ್ಧಾರ ಅನ್ಯಾಯದಿಂದ ಕೂಡಿದೆ ಎಂದು ನನಗೆ ಅನಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದೆ’ ಎಂದಿದ್ದಾರೆ.
ಒಬ್ಬ ಹಿಂದೂವಾಗಿ ನನಗೆ ತುಂಬಾ ಅಸಹ್ಯವೆನಿಸಿತು. ಆ ಸಮಯದಲ್ಲಿ ನಾನು ನನ್ನ ಪೋನ್ ಲಿಸ್ಟ್ನಲ್ಲಿದ್ದ ಎಲ್ಲಾ ಮುಸ್ಲಿಂ ಸ್ನೇಹಿತರಿಗೆ ಸಂದೇಶ ಕಳುಹಿಸಿ ಕ್ಷಮೆಯಾಚಿಸಿದ್ದಾಗಿ ಸ್ವರಾ ಭಾಸ್ಕರ್ ಹೇಳಿರುವ ವಿಡಿಯೋ ಈಗ ವಿವಾದದ ರೂಪ ಪಡೆದುಕೊಂಡಿದೆ.
ಶಾರುಖ್ ಖಾನ್, ಆಮಿರ್ ಖಾನ್, ಸಲ್ಮಾನ್ ಖಾನ್ ಅವರಿಂದ ಹಿಡಿದು ಫಹಾದ್ ಅವರವರೆಗೂ ನನಗೆ ತಿಳಿದಿರುವ ಎಲ್ಲಾ ಮುಸ್ಲಿಮರನ್ನು ತಲುಪಲು ಬಯಸಿದೆ. ಒಬ್ಬ ಹಿಂದೂವಾಗಿ, ನಡೆಯುತ್ತಿರುವ ಘಟನೆಗೆ ನಾನು ಕ್ಷಮೆ ಕೋರುತ್ತೇನೆ, ನನಗೆ ನಾಚಿಕೆಯಾಗುತ್ತಿದೆ ಮತ್ತು ಈ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಅವರಿಗೆ ತಿಳಿಸಲು ಬಯಸಿದ್ದೆ’ ಎಂದು ನಟಿ ಹೇಳಿದ್ದಾರೆ.