ಬೆಂಗಳೂರು: ನಟ ರಜನಿಕಾಂತ್ ಅಭಿಯನದ 'ಲಿಂಗಾ' ಸಿನಿಮಾ ಗೆದ್ದಿದೆಯಾ? ಸೋತಿದೆಯಾ? ಎನ್ನುವ ಪ್ರಶ್ನೆಗಿಂತ ರಜನಿಕಾಂತ್ಗೆ ಸುತ್ತಿಕೊಂಡಿರುವ ರಾಜಕೀಯದ ಹಗ್ಗ ಅವರಚಿತ್ರವನ್ನು ಮಾತ್ರವಲ್ಲ, ರಜನಿಕಾಂತ್ರನ್ನೇ ಬಿಗಿದು ಮೂಲೆಗುಂಪು ಮಾಡಲಿದೆಯಾ ಎಂಬ ಆತಂಕ ಮೂಡಿದೆ.
ಈ ಸುದ್ದಿಗೆ ಮೂಲವಾಗಿರುವುದು 'ಲಿಂಗಾ' ಚಿತ್ರವೇ. ರಜನಿಕಾಂತ್ ಅಭಿನಯದ ಲಿಂಗಾ ಸಿನಿಮಾ ನನಗೆ ನಷ್ಟು ಉಂಟು ಮಾಡಿದೆ. ಅವರು ನನಗೆ ನಷ್ಟ ಪರಿಹಾರ ಕೊಡಬೇಕು ಎಂದು ಹೇಳಿಕೊಂಡು ಕೆಲ ವಿತರಕರು ತಿರುಗಾಡುತ್ತಿದ್ದಾರೆ.
ರಾಕ್ಲೈನ್ ವೆಂಕಟೇಶ್ 120 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಲಿಂಗಾ ಚಿತ್ರ ವಾಸ್ತವದಲ್ಲಿ ಯಾರಿಗೂ ನಷ್ಟದ ಹೊರೆ ಆಗಿಲ್ಲ. ಹಾಗೇನಾದರು ತಮ್ಮ ಚಿತ್ರಗಳಿಂದ ನಷ್ಟವಾಗಿದ್ದರೆ ಅವರಿಗೆ ಮತ್ತೆ ಕಾಲ್ಶೀಟ್ ಕೊಟ್ಟು ಸಿನಿಮಾ ಮಾಡಿಸುವಷ್ಟು ಮಾನವೀಯತೆ ರಜನಿಕಾಂತ್ ಉಳಿಸಿಕೊಂಡಿದ್ದಾರೆ.
ಆದರೂ, ರಜನಿ ಸುತ್ತ ಅಪ ಪ್ರಚಾರದ ಗೂಡು ಕಟ್ಟುವ ಕೆಲಸ ಮಾತ್ರ ಅಮ್ಮ ಪಾಳೆಯದಿಂದ ನಿರಂತರವಾಗಿ ನಡೆಯುತ್ತಿದೆ. ತಮಿಳುನಾಡಿನಲ್ಲಿ ಅತ್ಯಂತ ಕಡಿಮೆ ಚಿತ್ರಮಂದಿರಗಳಲ್ಲಿ ಲಿಂಗಾ ಚಿತ್ರ ಬಿಡುಗಡೆಯಾಗಿದ್ದು ಕೂಡ ಇಂಥ ರಾಜಕೀಯ ಹುನ್ನಾರದಿಂದಲೇ. ಹಾಗೆ ನೋಡಿದರೆ ಲಿಂಗಾ ಸಿನಿಮಾ ವ್ಯವಹಾರಿಕವಾಗಿ ನಷ್ಟವಂತೂ ಆಗಿಲ್ಲ. ಅದರ ನಿರ್ಮಾಣದ ವೆಚ್ಚ ಹೆಚ್ಚಾಯಿತು ಎನ್ನುವುದು ಬಿಟ್ಟರೆ, ಯಾರಿಗೂ ನಷ್ಟವಾಗಿಲ್ಲ. ಬಿಡುಗಡೆಗೆ ಮುಂಚೆಯೇ ಒಳ್ಳೆಯ ಬ್ಯುಸಿನೆಸ್ ಮಾಡಿದೆ. ಆದರೂ 'ಲಿಂಗಾ' ಸಿನಿಮಾಗೆ ನಷ್ಟದ ಹಣೆ ಪಟ್ಟಿ ಕಟ್ಟುತ್ತಿರುವುದು ಯಾಕೆ?
ಇದು ಹೊಸದಲ್ಲ: ತಮ್ಮ ಮಾತು ಕೇಳದವರನ್ನು ಮೂಲೆಗುಂಪು ಮಾಡುವುದು ತಮಿಳು ರಾಜಕೀಯಕ್ಕೆ ಹೊಸದಲ್ಲ. ಇದು ಹಳೆ ಪರಂಪರೆ. ಈ ಹಿಂದೆ ಹಾಸ್ಯನಟ ವಡಿವೇಲ್ರನ್ನು ಇದೇ ರೀತಿ ತುಳಿಯುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಇನ್ನೇನು ವಡಿವೇಲ್ರ ಸಿನಿ ಕೆರಿಯರ್ ಮುಗಿದೇ ಹೋಯಿತು ಎಂದುಕೊಳ್ಳಲಾಗಿತ್ತು. ವಡಿವೇಲ್ ಮೂಲೆ ಸೇರಿದ ಮೇಲೆಯೇ ನಟ ವಿವೇಕ್ ಮತ್ತಷ್ಟು ಶೈನಿಂಗ್ ಆಗಲು ಸಾಧ್ಯವಾಯಿತು. ಆದರೆ, ಶಿವಾಜಿ ಚಿತ್ರದ ನಂತರ ವಡಿವೇಲ್ ತಮ್ಮ ಹಳೆ ಫಾರ್ಮ್ಗೆ ಬಂದರು.
ಈಘ ಅದೇ ಹುನ್ನಾರವನ್ನು ನಟ ರಜನಿಕಾಂತ್ ಅವರ ಮೇಲೆ ಪ್ರಯೋಗಿಸುತ್ತಿದ್ದು, ಅದಕ್ಕೆ ಲಿಂಗಾ ಸಿನಿಮಾ ಗುರಿಯಾಗಿದೆ. ಅಲ್ಲದೆ, ಮೋದಿ ಅವರ ಸ್ವಚ್ಛ ಭಾರತ ಕಾರ್ಯಕ್ರಮಕ್ಕೆ ಹಾಜರಾದ ನಟ ಕಮಲ್ ಹಾಸನ್ರ ಮೇಲೆ, ಕತ್ತಿ ಚಿತ್ರದ ನಂತರ ನಟ ವಿಜಯ್ರ ಮೇಲೆ ಅಮ್ಮ ಕತ್ತಿ ಮಸೆಯುತ್ತಲೇ ಇದ್ದಾರೆ. ಹೀಗಾಗಿಯೇ ಕತ್ತಿ ಚಿತ್ರದ ಸೋಲಿನಲ್ಲಿ ಅಮ್ಮನ ರಾಜಕೀಯದ್ದೇ ದೊಡ್ಡ ಪಾಲು ಇದೆ ಎನ್ನಲಾಗುತ್ತಿದೆ. ಆದರೆ, ತಾನೇ ಒಂದು ಸಿಸ್ಟಮ್ ಆಗಿ ಬೆಳೆದು ನಿಂತಿರುವ ರಜನಿಯನ್ನು ಅಮ್ಮ ಅಲ್ಲಾಡಿಸಲು ಸಾಧ್ಯವಿಲ್ಲ ಎಂಬುದು ಅವರ ಅಭಿಮಾನಿಗಳ ನಂಬಿಕೆ.
- ಆರ್.ಕೇಶಮೂರ್ತಿ
Advertisement