ಬೆಂಗಳೂರು: ಸದ್ಯಕ್ಕೆ ತಮ್ಮ ತ್ರಿಭಾಷಾ ಚಲನಚಿತ್ರ 'ಹೆಬ್ಬುಲಿ'ಗೆ ನಟ ಸುದೀಪ್ ಒಪ್ಪಿಗೆ ನೀಡಿದ್ದು ಉಳಿದ ತಾರಾಗಣಕ್ಕೆ ಮಾತುಕತೆ ನಡೆಸುತ್ತಿದ್ದೇನೆ ಎಂದು ನಿರ್ದೇಶಕ ಎಸ್ ಕೃಷ್ಣ ತಿಳಿಸಿದ್ದಾರೆ. ಕನ್ನಡ, ತಮಿಳು ಮತ್ತು ತೆಲಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣಗೊಳ್ಳಲಿದೆ.
ಈಗಾಗಲೇ ವದಂತಿ ಹಬ್ಬಿರುವಂತೆ ಈ ಸಿನೆಮಾಗೆ ಅಮಿತಾಬ್ ಬಚ್ಚನ್ ಮತ್ತು ಅರ್ಜುನ್ ರಾಂಪಾಲ್ ಅವರು ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ಅಲ್ಲಗೆಳೆಯದ ಎಸ್ ಕೃಷ್ಣ, "ಅಮಿತಾಬ್-ಸುದೀಪ್ ಜೋಡಿಯನ್ನು ಮತ್ತೆ ಬೆಳ್ಳಿ ತೆರೆಯ ಮೇಲೆ ತರಬೇಕೆಂಬುದು ನನ್ನಿಷ್ಟ. ನನ್ನಿಬ್ಬರು ಗೆಳೆಯರ ಮೂಲಕ ಅಮಿತಾಬ್ ಬಚ್ಚನ್ ಅವರನ್ನು ತಲುಪಲು ಪ್ರಯತ್ನಿಸುತ್ತಿದ್ದೇನೆ. ಆದರೆ ಇದಿನ್ನೂ ಅಧಿಕೃತವಲ್ಲ. ಅರ್ಜುನ್ ರಾಂಪಾಲ್ ಅವರನ್ನು ಕೂಡ ಇನ್ನೂ ಭೇಟಿ ಮಾಡಿಲ್ಲ" ಎಂದಿದ್ದಾರೆ ನಿರ್ದೇಶಕ ಕೃಷ್ಣ.
ಮೊದಲ ಹಂತದ ಚಿತ್ರೀಕರಣ ಕಾಶ್ಮೀರದಲ್ಲಿ ನಡೆಯಲಿದ್ದು, ಮೂರೂ ಭಾಷೆಯ ಪ್ರೇಕ್ಷಕರಿಗೂ ಇಷ್ಟವಾಗಬಲ್ಲ ದಕ್ಷಿಣ ಭಾರತದ ನಟಿಯನ್ನು ಹುಡುಕುತ್ತಿದ್ದೇನೆ. ಹಾಗೆಯೇ ಕ್ಲೈಮ್ಯಾಕ್ಸ್ ಗಾಗಿ ಸ್ಥಳವನ್ನೂ ಹುಡುಕುತ್ತಿದ್ದೇನೆ ಎಂದಿದ್ದಾರೆ ಕೃಷ್ಣ.
Advertisement