ಗೋವಾ: ಸಿನೆಮಾ ದಂತಕಥೆಗಳಾದ ರಜನಿಕಾಂತ್ ಮತ್ತು ಅಮಿತಾಬ್ ಬಚ್ಚನ್, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಮತ್ತು ಗೋವಾ ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಇನ್ನೂ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ೪೫ ನೇ ಭಾರತದ ಅಂತರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ಗೆ ಅದ್ಧೂರಿ ಚಾಲನೆ ದೊರಕಿತು.
ರಾಜ್ಯದ ರಾಜಧಾನಿಯಲ್ಲಿ ನಡೆಯಲಿರುವ ಈ ೧೧ ದಿನದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ೭೫ ದೇಶಗಳ ೧೭೯ ಚಲಚಿತ್ರಗಳು ಪ್ರದರ್ಶನ ಕಾಣಲಿವೆ.
ಭಾರತದಿಂದ ೨ ಸಿನೆಮಾಗಳು ಒಳಗೊಂಡಂತೆ ಜಾಗತಿಕವಾಗಿ ೧೫ ಸಿನೆಮಾಗಳು 'ಗೋಲ್ಡನ್ ಪೀಕಾಕ್' ಪ್ರಶಸ್ತಿಗೆ ಸ್ಪರ್ಧಿಸಲಿವೆ.
ಇದೇ ಸಮಯದಲ್ಲಿ ಮಾತನಾಡಿದ ಮುಖ್ಯ ಅತಿಥಿ ಅಮಿತಾಬ್ ಬಚ್ಚನ್ ಕತ್ತಲೆ ಸಿನೆಮಾ ಕೋಣೆ ಎಂಬುದು ಮಾನವನ ಐಕ್ಯತೆಯ ಬಹು ದೊಡ್ಡ ಉದಾಹರಣೆ ಎಂದಿದ್ದಾರೆ.
"ನಾವು ಈ ಕತ್ತಲೆ ಕೋಣೆಯೊಳಗೆ ಕುಳಿತಾಗ, ನಮ್ಮ ಪಕ್ಕ ಕುಳಿತವನ ಜಾತಿ, ಮತ, ಧರ್ಮ ಯಾವುದನ್ನೂ ಕೇಳುವುದಿಲ್ಲ. ವೇಗವಾಗಿ ವಿಘಟಿತಗೊಳ್ಳುತ್ತಿರುವ ವಿಶ್ವದಲ್ಲಿ, ಮಾನವನ ಐಕ್ಯೆತಯನ್ನು ಸಾರುವ ಸಿನೆಮಾ ಕೋಣೆಗಿಂತ ಉತ್ತಮ ಉದಾಹರಣೆ ಇದೆಯೇ? " ಎಂದಿದ್ದಾರೆ ಅಮಿತಾಬ್ ಬಚ್ಚನ್.
ಚಪ್ಪಾಳೆಯ ಕರಾಡತನದ ಮಧ್ಯೆ ಈ ಬಾಲಿವುಡ್ ನ ತಾರೆ ತಮ್ಮ ತಂದೆ-ಖ್ಯಾತ ಕವಿ ಹರಿವಂಶರಾಯ್ ಬಚ್ಚನ್ ವರ "ಹಿಮ್ಮತ್ ಕರ್ನೆ ವಾಲೋನ್ ಕಿ ಹಾರ್ ನಹಿ ಹೋತಿ" ಎಂಬ ಪದ್ಯವನ್ನು ವಾಚಿಸಿದರು.
ಸಿನೆಮಾ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ರಜನಿಕಾಂತ ಅವರಿಗೆ ಪ್ರಧಾನ ಮಾಡಿದ ಅರುಣ್ ಜೇಟ್ಲಿ ಅವರು ಕ್ರಿಕೆಟ್ ಭಾರತದ ಒಂದು ಧರ್ಮ, ಸಿನೆಮಾ ಕೂಡ ಭಾರತದಲ್ಲಿ ಮತ್ತೊಂದು ಸಮಾನಾಂತರ ಧರ್ಮ ಎಂದರು.
ಮೋಶೆನ್ ಮಖ್ ಮಾಲ್ಬಾಪ್ಹ್ ನಿರ್ದೇಶಿಸಿರುವ "ದ ಪ್ರೆಸಿಡೆಂಟ್" ಚಿತ್ರೋತ್ಸವದ ಉದ್ಘಾಟನಾ ಚಲನಚಿತ್ರವಾಗಿದ್ದು, ವೋಂಗ್ ಕಾರ್ ವೈ ನಿರ್ದೇಶನದ "ದ ಗ್ರಾಂಡ್ ಮಾಸ್ಟರ್" ಚಲನಚಿತ್ರದಿಂದ ಚಿತ್ರೋತ್ಸವ ಮುಕ್ತಾಯವಾಗಲಿದೆ.
Advertisement