ಬೆಂಗಳೂರು: ಡೈಸಿ ಬೋಪಣ್ಣ, ನಿಧಿ ಸುಬ್ಬಯ್ಯ, ಹರ್ಷಿಕ ಪೂಣಚ್ಚ ಇವರುಗಳ ನಂತರ ಕೊಡಗಿನಿಂದ ಸ್ಯಾಂಡಲ್ವುಡ್ ಗೆ ಹೊಸ ಎಂಟ್ರಿ ಕೃಷಿ ಥಪಂಡ. ರಾಜವರ್ಧನ್ ಅವರ ಹೊಸ ಚಿತ್ರ 'ಅಮರ ಚಿತ್ರ ಕಥಾ'ಗೆ ಈ ಕೊಡಗಿನ ಚೆಲುವೆ ಆಯ್ಕೆಯಾಗಿದ್ದಾರೆ. ಕೃಷಿ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ತಮಿಳು ಚಿತ್ರದಿಂದ. ಇದು ಅವರ ನಾಲ್ಕನೇ ಚಿತ್ರ. "ನನ್ನ ತಮಿಳು ಚಿತ್ರದ ಚಿತ್ರೀಕರಣ ಮುಗಿದಿದೆ. ಇನ್ನೊಂದು ತಿಂಗಳಲ್ಲಿ ಬಿಡುಗಡೆ ಕಾಣುವ ಸಾಧ್ಯತೆ ಇದೆ. ಕನ್ನಡದಲ್ಲಿ 'ಕಹಿ' ಎಂಬ ಚಿತ್ರದಲ್ಲೂ ನಟಿಸಿದ್ದೇನೆ. ಅದು ಜೂನ್ ಕೊನೆಯ ಭಾಗಕ್ಕೆ ಬಿಡುಗಡೆ ಕಾಣುವ ಸಾಧ್ಯತೆ ಇದೆ. ಸದ್ಯಕ್ಕೆ 'ಅಕಿರಾ' ಸಿನೆಮಾದ ಚಿತ್ರೀಕರಣದಲ್ಲಿದ್ದೇನೆ. ಈ ಸಮಯದಲ್ಲೇ 'ಅಮರ ಚಿತ್ರ ಕಥಾ'ಗೆ ಅವಕಾಶ ಸಿಕ್ಕಿದೆ. ಆ ಚಿತ್ರದ ಚಿತ್ರೀಕರಣ ಏಪ್ರಿಲ್ ೨೪ ರಿಂದ ಪ್ರಾರಂಭವಾಗಲಿದೆ" ಎನ್ನುತ್ತಾರೆ ಕೃಷಿ.
ಶಾಸ್ತ್ರೀಯ ನೃತ್ಯಗಾರ್ತಿಯಾಗಿರುವ ಕೃಷಿ ತನ್ನ ಸಾಮರ್ಥ್ಯದ ಮೇಲೆ ಆಯ್ಕೆಯಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. "ಬಹು ರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದೆ. ಒಂಭತ್ತು ತಿಂಗಳ ಹಿಂದ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಭಾಗವಹಿಸುವಂತೆ ನನ್ನ ಗೆಳೆಯರು ಸೂಚಿಸಿದರು. ಮಿಸ್ ಕರ್ನಾಟಕ ಆದೆ. ತಮಿಳು ಚಿತ್ರದ ಆಡಿಶನ್ ನಲ್ಲಿ ಭಾಗವಹಿಸಿ ಆಯ್ಕೆಯಾದೆ. ಹೀಗೆ ಅವಕಾಶಗಳು ಹುಡುಕಿಕೊಂಡು ಬಂದವು" ಎನ್ನುತ್ತಾರೆ ಕೃಷಿ.
Advertisement