ನಟ ರವಿಚಂದ್ರನ್ ಸಾರಥ್ಯದಲ್ಲಿ ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಡ್ಯಾನ್ಸಿಂಗ್ ಸ್ಟಾರ್' ರಿಯಾಲಿಟಿ ಶೋ ಎರಡನೇ ಹಂತಕ್ಕೆ ಕಾಲಿಟ್ಟಿದೆ. ಅತಿ ವೀಕ್ಷಕರನ್ನು ಒಳಗೊಂಡಿರುವ ಈ ರಿಯಾಲಿಟಿ ಶೋಗೆ ದೊಡ್ಡ ಮಟ್ಟದಲ್ಲಿ ಟಿಆರ್ಪಿ ಬರುತ್ತಿದೆ ಎಂಬುದು ಶೋ ಆಯೋಜಕರ ಸಂಭ್ರಮದ ಮಾತು.
ನಟ ರವಿಚಂದ್ರನ್, ನಟಿ ಪ್ರಿಯಾಮಣಿ, ಮಯೂರಿ ತೀರ್ಪುಗಾರರಾಗಿರುವ ಈ ಶೋನ ನಿರೂಪಣೆ ಅಕುಲ್ ಬಾಲಾಜಿ ಅವರದ್ದು. ಇತ್ತೀಚೆಗಷ್ಟೆ ಸ್ಯಾಂಡಲ್ ವುಡ್ ಸ್ಟುಡಿಯೋದಲ್ಲಿ ಶೋನ ವಿಶೇಷವಾದ ಎಪಿಸೋಡ್ ಅನ್ನು ಚಿತ್ರೀಕರಣ ಮಾಡಲಾಯಿತು.
ಯಶಸ್ವಿಯಾಗಿ ಮುನ್ನಡೆಯುತ್ತಿರುವ `ಡ್ಯಾನ್ಸಿಂಗ್ ಸ್ಟಾರ್' ಶೋ ಕುರಿತು ಮಾತನಾಡಲು ಅದರ ತೀರ್ಪುಗಾರರು ಹಾಗೂ ಈಟಿವಿ ಕಾರ್ಯಕ್ರಮ ವಿಭಾಗದ ಪರಮೇಶ್ವರ್ ಗುಂಡ್ಕಲ್ ಮಾಧ್ಯಮಗಳ ಮುಂದೆ ಪ್ರತ್ಯಕ್ಷರಾದರು. ರವಿಚಂದ್ರನ್ ಅವರ ನೇರ ಮಾತುಗಳು, ಪ್ರಿಯಾಮಣಿ ಅವರ ಗ್ಲಾಮರ್, ಅಕುಲ್ ಬಾಲಾಜಿಯ ತರಲೆಗಳಿಂದಲೇ ಈ ಶೋ ತನ್ನ ಶಕ್ತಿಯನ್ನು ಸಾರಿದೆ ಎಂಬುದು ತಂಡದ ಅಭಿಪ್ರಾಯ.
ನಾನು ಸ್ಪರ್ಧಾಳುಗಳಿಗೆ ತುಂಬಾ ಬೈಯುತ್ತೇನೆ ಎಂದುಕೊಳ್ಳುವವರೇ ಹೆಚ್ಚು. ಬೇರೆ ಉದ್ದೇಶ ಇಟ್ಟುಕೊಂಡು ನಾನು ಅವರ ಮೇಲೆ ಸಿಟ್ಟು ಮಾಡಿಕೊಳ್ಳುವುದಿಲ್ಲ. ಪ್ರೀತಿಯಿಂದ ಬೈಯುತ್ತೇನೆ. ನನ್ನ ಮಾತುಗಳು ಅವರ ಕಲಿಕೆಗೆ ಉತ್ಸಾಹ ನೀಡುವಂತಾಗಲಿ ಎಂಬುದು ನಟ ರವಿಚಂದ್ರನ್ ಅವರ ಮಾತು.
ಇನ್ನು ನಟಿ ಪ್ರಿಯಾಮಣಿ ಮಲೆಯಾಳಂನ ರಿಯಾಲಿಟಿ ಶೋನಲ್ಲೂ ಬ್ಯುಸಿಯಾಗಿದ್ದಾರೆ. ಆದರೂ ಕನ್ನಡದಲ್ಲಿ ನಡೆಯುತ್ತಿರುವ ಈ ಡ್ಯಾನ್ಸಿಂಗ್ ಸ್ಟಾರ್ ಶೋಗೆ ಬಂದಿರುವುದು ಶೋನ ಹೆಚ್ಚುಗಾರಿಕೆಯಂತೆ. ಮಯೂರಿ, ನೃತ್ಯಪರ ಡ್ಯಾನ್ಸರ್. ಈ ಶೋ ಮೊದಲ ಹಂತದ 20 ಎಪಿಸೋಡ್ಗಳು ಪ್ರಸಾರವಾಗಿದ್ದು, ಇನ್ನೂ 16 ಎಪಿಸೋಡ್ಗಳು ಉಳಿದುಕೊಂಡಿವೆ. ಈ ಕಂತುಗಳನ್ನೂ ಕೂಡ ಆದಷ್ಟು ಬೇಗ ಪ್ರಸಾರ ಮಾಡಲಾಗುತ್ತದೆ. ಇದಾದ ನಂತರ ಸೆಕೆಂಡ್ ಸೀಸನ್ನ ಎಪಿಸೋಡ್ಗಳು ಪ್ರಸಾರವಾಗಲಿವೆ.
Advertisement