ಬೆಂಗಳೂರು: ಜೂನ್-ಜುಲೈ ತಿಂಗಳೆಲ್ಲಾ ಪರಾಭಾಷಾ ಚಿತ್ರಗಳದ್ದೇ ಆರ್ಭಟ. ಆ ಆರ್ಭಟದ ನಡುವೆ ಕನ್ನಡ ಚಿತ್ರಗಳು ಬಿಡುಗಡೆಯಿಂದ ದೂರ ಉಳಿದು, ಈಗ ಆಗಸ್ಟ್ ನಲ್ಲಿ ಪೈಪೋಟಿಗೆ ಬಿದ್ದಿವೆ.
ಗಣೇಶ್ ೨೫ನೆಯ ಚಿತ್ರ ಅವರ 'ಬುಗುರಿ'ಗೆ ಸೆನ್ಸಾರ್ ಮಂಡಲಿ 'ಯು' ಪ್ರಮಾಣಪತ್ರ ನೀಡಿದ್ದು, ನಿರ್ದೇಶಕ ಎಂ ಡಿ ಶ್ರೀಧರ್ ಅವರು ಸಿನೆಮಾ ಆಗಸ್ಟ್ ೧೪ರರಂದು ಬಿಡುಗಡೆಯಾಗಲಿದೆ ಎಂದಿದ್ದಾರೆ. "ಈ ಮುಂಚೆಯೇ ಸ್ವಾತಂತ್ರ್ಯ ದಿನಾಚರಣೆ ಸಮಯಕ್ಕೆ ಬಿಡುಗಡೆ ಮಾಡಬೇಕೆಂದುಕೊಂಡಿದ್ದೆವು. ಈಗ ಸೆನ್ಸಾರ್ ಮಂಡಲಿ ಅದಕ್ಕೆ ಹಾದಿ ಸುಗಮ ಮಾಡಿಕೊಟ್ಟಿದೆ" ಎನ್ನುತ್ತಾರೆ ಶ್ರೀಧರ್.
ಇದೇ ಸಮಯಕ್ಕೆ ದರ್ಶನ್ ಅಭಿನಯದ 'ಐರಾವತ' ಕೂಡ ಬಿಡುಗಡೆಯಾಗಲಿದೆ ಎಂಬ ಸುದ್ದಿ ದಟ್ಟವಾಗಿದೆ. ನಿರ್ದೇಶಕ ಎ ಪಿ ಅರ್ಜುನ್ ಮತ್ತು ನಟ ದರ್ಶನ್ ನಡುವಿನ ಜಟಾಪಟಿಯಿಂದ ಈ ಯೋಜನೆ ಹಲವಾರು ಬಾರಿ ಸ್ಥಗಿತಗೊಂಡು ಈಗ ಪೂರ್ಣಗೊಳ್ಳುವತ್ತ ಸಾಗಿದೆಯಂತೆ.
ಹಾಗೆಯೇ ಬಹುನಿರೀಕ್ಷಿತ ಹಾಗು ವಿವಾದದ ಅಲೆ ಎಬ್ಬಿಸಿರುವ ಉಪ್ಪಿ-೨ ಕೂಡ ಸೆನ್ಸಾರ್ ಮಂಡಳಿಯ ಬಾಗಿಲು ತಟ್ಟಿದ್ದು, ಮಂಡಲಿ ಪ್ರಮಾಣಪತ್ರ ನೀಡಿದರೆ ಇದೂ ಕೂಡ ಅದೇ ದಿನ ಬಿಡುಗಡೆಯಗಲಿದೆಯಂತೆ.
ಹೀಗೆ ಗಣೇಶ್, ಉಪೇಂದ್ರ ಮತ್ತು ದರ್ಶನ್ ತಮ್ಮ ಸಿನೆಮಾಗಳನ್ನು ಒಂದೆ ದಿನ ಬಿಡುಗಡೆ ಮಾಡಲಿದ್ದು ಪೈಪೋಟಿಗೆ ಬಿದ್ದಿದ್ದಾರೆ. ಯಶಸ್ಸು ಯಾರ ಕಡೆಗಿದೆಯೊ ಕಾದು ನೋಡಬೇಕು.
ಆಗಸ್ಟ್ ನಲ್ಲಿ ಆಟಗಾರ, ಆರ್ ಎಕ್ಸ್ ಸೂರಿ, ಕೆಂಡಸಂಪಿಗೆ ಇತ್ಯಾದಿ ಸಿನೆಮಾಗಳು ಕೂಡ ಬಿಡುಗಡೆಗೆ ಕಾಯುತ್ತಿವೆ. ಈ ಸಿನೆಮಾಗಳ ಗುಣಮಟ್ಟ ಚೆನ್ನಾಗಿರಲಿ ಎಂಬುದು ಪ್ರೇಕ್ಷಣ ಆಶಯ.
Advertisement