ಖ್ಯಾತ ತೆಲುಗು ನಟ ಚಿರಂಜೀವಿ
ಖ್ಯಾತ ತೆಲುಗು ನಟ ಚಿರಂಜೀವಿ

ನಟನೆಗೆ ಹಿಂದಿರುಗಿದ ಚಿರು; ನಿರ್ದೇಶನಕ್ಕೆ ಪೂರಿ ಜಗನ್ನಾಥ್ ಸಜ್ಜು

ನಟನೆಯಿಂದ ರಾಜಕೀಯಕ್ಕೆ ಜಿಗಿದ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಮತ್ತೆ ಬೆಳ್ಳಿ ತೆರೆಗೆ ಹಿಂದಿರುಗಲು ಸಜ್ಜಾಗಿದ್ದಾರೆ.

ಹೈದರಾಬಾದ್: ನಟನೆಯಿಂದ ರಾಜಕೀಯಕ್ಕೆ ಜಿಗಿದ ತೆಲುಗು ಸೂಪರ್ ಸ್ಟಾರ್ ಚಿರಂಜೀವಿ ಮತ್ತೆ ಬೆಳ್ಳಿ ತೆರೆಗೆ ಹಿಂದಿರುಗಲು ಸಜ್ಜಾಗಿದ್ದಾರೆ. ಏಳು ವರ್ಷದ ನಂತರ ನಟಿಸಲಿರುವ ಈ ಸಿನೆಮಾ ಅವರ ೧೫೦ನೆಯ ಸಿನೆಮಾ ಆಗಲಿದೆ.

ಆಗಸ್ಟ್ ೨೨ ರಂದು ಈ ನಟನ ೬೦ ನೆ ಹುಟ್ಟು ಹಬ್ಬಕ್ಕೆ ಸೆಟ್ಟೇರಲಿರುವ ಈ ಸಿನೆಮಾವನ್ನು ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಿಸಲಿದ್ದಾರೆ. ಇದನ್ನು ಸೋಮವಾರ ಧೃಢೀಕರಿಸಿರುವ ಜಗನ್ನಾಥ್, ಚಿರಂಜೀವಿ ಮಗ ಮತ್ತು ನಟ ರಾಮ್ ಚರಣ ತೇಜ ಈ ಸಿನೆಮಾ ನಿರ್ಮಿಸಲಿದ್ದಾರೆ ಎಂದಿದ್ದಾರೆ.

ಜಗನ್ ಎಂದೇ ಪ್ರಖ್ಯಾತವಾಗಿರುವ ನಿರ್ದೇಶಕ ಪೂರಿ ಜಗನ್ನಾಥ್ ಈ ಸಿನೆಮಾದ ಬಗ್ಗೆ ಹೆಚ್ಚು ಉತ್ಸುಕರಾಗಿದ್ದಾರೆ. "ಒಂದು ಕಾಲಕ್ಕೆ ಚಿರಂಜೀವಿ ಸಿನೆಮಾಗಳಿಗೆ ಚಿತ್ರಮಂದಿರಗಳನ್ನು ಸಜ್ಜು ಮಾಡುತ್ತಿದ್ದವನು ಅವರ ಸಿನೆಮಾವನ್ನು ನಿರ್ದೇಶಿಸುತ್ತಾನೆ ಎಂದು ಯಾರಿಗೆ ಗೊತ್ತಿತ್ತು" ಎಂದು ಜಗನ್ ಟ್ವೀಟ್ ಮಾಡಿದ್ದಾರೆ.

ಜಗನ್ ಅವರು ಈ ಸಿನೆಮಾ ನಿರ್ದೇಶಿಸಲಿದ್ದಾರೆ ಎಂದು ರಾಮ್ ಚರಣ್ ತೇಜ ಕೂಡ ಧೃಢೀಕರಿಸಿದ್ದಾರೆ.

ತೆಲುಗು ಸಿನೆಮಾ ಉದ್ಯಮದ ಅತಿ ಹೆಚ್ಚು ಪ್ರಖ್ಯಾತ ನಟರಲ್ಲಿ ಒಬ್ಬರಾದ ಚಿರಂಜೀವಿ ೨೦೦೮ರಲ್ಲಿ ರಾಜಕೀಯಕ್ಕೆ ಧುಮುಕಿ ಸಿನೆಮಾ ಪ್ರಪಂಚ ತೊರೆದಿದ್ದರು. ೨೦೦೮ರಲ್ಲಿ ಪ್ರಜಾ ರಾಜ್ಯಂ ಪಕ್ಷವನ್ನು ಸ್ಥಾಪಿಸಿದ್ದರು, ತಮ್ಮ ಸಿನೆಮಾಗಳಂತೆ ಬ್ಲಾಕ್ ಬಸ್ಟರ್ ಆಗುವ ಬದಲು ೨೦೦೯ರ ಚುನಾವಣೆಗಳಲ್ಲಿ ನೆಲಕಚ್ಚಿದ್ದರು.

೨೦೧೧ರಲ್ಲಿ ಪ್ರಜಾ ರಾಜ್ಯಂ ಪಕ್ಷವನ್ನು ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳಿಸಿದ ಮೇಲೆ, ರಾಜ್ಯಸಭೆಗೆ ನೇಮಕಗೊಂಡು ರಾಜ್ಯ ಸಚಿವರು ಕೂಡ ಆಗಿದ್ದರು.

೧೯೭೮ರಲ್ಲಿ ಪನದಿರಲ್ಲು ಸಿನೆಮಾದ ಮೂಲಕ ಸಿನೆಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದ ಚಿರು ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com