ತೆಲುಗು ಸಿನೆಮಾ 'ಪಟಾಸ್' ರಿಮೇಕ್ ಗೆ ಗಣೇಶ್ ಮತ್ತು ಮಂಜು
ಬೆಂಗಳೂರು: ತೆಲುಗು ಸಿನೆಮಾ 'ಪಟಾಸ್' ಚಲನಚಿತ್ರದ ರಿಮೇಕ್ ಚಿತ್ರದಲ್ಲಿ ಮುಂಗಾರು ಮಳೆ ಖ್ಯಾತಿಯ ಗಣೇಶ್ ನಟಿಸಲಿದ್ದು, ಈ ಚಿತ್ರವನ್ನು ಮಂಜು ಸ್ವರಾಜ್ ನಿರ್ದೇಶಿಸಲಿದ್ದಾರೆ. ಈ ಹಿಂದೆ 'ಶ್ರಾವಣಿ ಸುಬ್ರಮಣ್ಯ' ಸಿನೆಮಾದಲ್ಲಿ ಗಣೇಶ್ ಅವರನ್ನು ಮಂಜು ನಿರ್ದೇಶಿಸಿದ್ದರು. ಜೂನ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ ಎನ್ನಲಾಗಿದೆ.
"ಗಣೇಶ್ ಚಿತ್ರದ ನಾಯಕರಾಗಲಿದ್ದಾರೆ ಹಾಗು ಮಂಜು ಸ್ವರಾಜ್ ಸಿನೆಮಾವನ್ನು ನಿರ್ದೇಶಿಸಲಿದ್ದಾರೆ. 'ಶ್ರಾವಣಿ ಸುಬ್ರಮಣ್ಯ' ಯಶಸ್ಸಿನ ನಂತರ ಈ ಜೋಡಿ ಬಹಳ ಜನಪ್ರಿಯತೆ ಪಡೆದಿದೆ. ಆದುದರಿಂದ ಅವರಿಬ್ಬರನ್ನು ಒಟ್ಟಿಗೆ ಕರೆತಂದಿದ್ದೇನೆ" ಎನ್ನುತ್ತಾರೆ ನಿರ್ಮಾಪಕ ಎಸ ವಿ ಬಾಬು.
ತಾತ್ಕಾಲಿಕವಾಗಿ ಸಿನೆಮಾಗಿ 'ಗಣಿ' ಎಂದು ಹೆಸರಿಡಲಾಗಿದ್ದು ಇದು ಮೂಲ ಸಿನೆಮಾದ ಸಂಪೂರ್ಣ ನಕಲಾಗಿರುವುದಿಲ್ಲ ಎನ್ನುತ್ತಾರೆ ನಿರ್ಮಾಪಕ.
"ಮೂಲ ಸಿನೆಮಾದ ಪ್ರತಿ ದೃಶ್ಯವನ್ನು ನಕಲು ಮಾಡುವುದರಿಂದ ಏನು ಉಪಯೋಗವಿಲ್ಲ. ಅದನ್ನು ಯಾರು ಬೇಕಾದರೂ ಮಾಡಬಹುದು. ಪ್ರಾದೇಶಿಕತೆಯನ್ನು ಉಳಿಸಿಕೊಳ್ಳಲು ನಾವು ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳುತ್ತೇವೆ" ಎಂದಿದ್ದಾರೆ ನಿರ್ಮಾಪಕ.
ಇನ್ನುಳಿದ ಪಾತ್ರವರ್ಗದ ಆಯ್ಕೆಯ ಕೆಲಸ ಇನ್ನು ಪೂರ್ಣಗೊಳ್ಳಬೇಕಿದ್ದು, ಒಂದು ಪ್ರಮುಖ ಪಾತ್ರಕ್ಕೆ ಬಾಲಿವುಡ್ ನ ಖ್ಯಾತ ನಟ ಮನೋಜ್ ಬಾಜಪೇಯಿ ಅವರನ್ನು ಕರೆತರಲು ಮಾತುಕತೆ ನಡೆದಿದೆ ಎಂದಿದ್ದಾರೆ ಬಾಬು.
ಈ ವರ್ಷದ ಮೊದಲ ಭಾಗದಲ್ಲಿ ಬಿಡುಗಡೆಯಾದ 'ಪಟಾಸ್', ಈ ವರ್ಷ ಅತಿ ಹೆಚ್ಚು ಯಶಸ್ಸು ಕಂಡ ಸಿನೆಮಾಗಳಲ್ಲಿ ಒಂದು. ಇದರ ಹಿಂದಿ ಮತ್ತು ತಮಿಳು ಅವತರಣಿಕೆಗಳಿಗೂ ಮಾತುಕತೆ ನಡೆದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ