ಬೆಂಗಳೂರು: ಯಾವತ್ತೂ ಬ್ಯುಸಿಯಾಗಿರುವ ನಟ ಡಾ. ಶಿವರಾಜಕುಮಾರ್ ಅವರಿಗೆ ಒಳ್ಳೆಯ ಕಥೆಗಳು ಅರಸಿ ಬರುತ್ತಲೇ ಇರುತ್ತವೆ. ಈಗ ಬಲ್ಲ ಮೂಲಗಳ ಪ್ರಕಾರ 'ಕಡ್ಡಿಪುಡಿ' ಸಿನೆಮಾದ ನಂತರ ನಿರ್ದೇಶಕ ಸೂರಿ, ಶಿವಣ್ಣನವರ ಮತ್ತೊಂದು ಸಿನೆಮಾವನ್ನು ನಿರ್ದೇಶಿಸಲಿದ್ದಾರೆ. ಸಿನೆಮಾದ ಹೆಸರು 'ಟಗರು' ಎಂದಿದ್ದು, ಅಡಿ ಶೀರ್ಷಿಕೆ 'ಮೈಯಲ್ಲಿ ಪೊಗರು' ಎಂದಿದೆಯಂತೆ.
ಇದನ್ನು ಧೃಢೀಕರಿಸಿದ ನಿರ್ದೇಶಕ "ಇದು ಸದ್ಯಕ್ಕೆ ಪ್ರಾರಂಭವಾಗುವ ಯೋಜನೆಯೇನಲ್ಲ. ಇಬ್ಬರೂ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದೇವೆ. ನಾನು ಶಿವರಾಜಕುಮಾರ್ ಜತೆಗೆ ಚರ್ಚಿಸಿದ್ದೇನೆ ಮತ್ತು ಒಂದು ಸಾಲಿನ ಕಥೆಯನ್ನು ಅವರು ಒಪ್ಪಿದ್ದಾರೆ. ಸ್ಕ್ರಿಪ್ಟ್ ಮುಗಿಸಲು ನಟ ನನಗೆ ಬೇಕಾದಷ್ಟು ಸಮಯ ನೀಡಿದ್ದಾರೆ. ಚಿತ್ರಕಥೆ ಅಂತಿಮವಾದ ಮೇಲಷ್ಟೇ ಮುಂದುವರೆಯಲು ಸಾಧ್ಯ" ಎನ್ನುತ್ತಾರೆ.
ಗಾಂಧಿನಗರದಲ್ಲಿ ಚಾಲ್ತಿಯಲ್ಲಿರುವ ವದಂತಿಯ ಪ್ರಕಾರ ಕೆ ಪಿ ಶ್ರೀಕಾಂತ್ ಈ ಸಿನೆಮಾ ನಿರ್ಮಿಸಲಿದ್ದಾರೆ.
ಪುನೀತ್ ರಾಜಕುಮಾರ್ ನಟನೆಯ 'ದೊಡ್ಮನೆ ಹುಡುಗ' ಸಿನೆಮಾದ ಚಿತ್ರೀಕರಣವನ್ನು ಮುಂದುವರೆಸಲು ಸೂರಿ ಹುಬ್ಬಳ್ಳಿಗೆ ತೆರಳಲಿದ್ದಾರೆ. "ಬಹಳಷ್ಟು ಚಿತ್ರೀಕರಣ ಮುಗಿದಿದೆ. ಈಗ ರವಿಶಂಕರ್ ಅವರ ಭಾಗದ ಚಿತ್ರೀಕರಣ ನಡೆಯಬೇಕಿದೆ. ಜತೆಜತೆಗೆ 'ಕೆಂಡಸಂಪಿಗೆ-ಕಾಗೆ ಬಂಗಾರ'ಕ್ಕೂ ನಟರ ಶೋಧನೆಯಲ್ಲಿದ್ದೇನೆ" ಎನ್ನುತ್ತಾರೆ ಸೂರಿ.
ಹಾಗೆಯೇ ಇಂದು ಶಿವರಾಜ್ ಕುಮಾರ್ ಅವರ 'ಕಿಲ್ಲಿಂಗ್ ವೀರಪ್ಪನ್ ಸಿನೆಮಾದ ಆಡಿಯೋ ಬಿಡುಗಡೆ ಹಮ್ಮಿಕೊಳ್ಳಲಾಗಿದೆ.
Advertisement