ಬೆಂಗಳೂರು: ನಟ ಶಿವರಾಜ್ ಕುಮಾರ್ ನಟನಾಗುತ್ತಾರೆ ಎಂದು ನನಗನಿಸಿರಲಿಲ್ಲ ಬದಲಾಗಿ ಕ್ರಿಕೆಟ್ ಆಟಗಾನಾಗುತ್ತಾರೆ ಎಂದೆಣಿಸಿದ್ದೆ ಎಂದು ನಿರ್ಮಾಪಕ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಲಿಯ ಅಧ್ಯಕ್ಷ ಸಾ ರಾ ಗೋವಿಂದು ಹೇಳಿದ್ದಾರೆ.
ಸೋಮವಾರ ಚಾಮುಂಡೇಶ್ವರಿ ಸ್ಟೂಡಿಯೋದಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಆಡಿಯೋ ಬಿಡುಗಡೆ ಸಮಾರಂಭದ ವೇಳೆ ಸಾ ರಾ ಗೋವಿಂದು ಅವರನ್ನು ಅಭಿನಂದಿಸಲಾಯಿತು. ಈ ವೇಳೆ ಮಾತನಾಡಿದ ಅವರು "ಅವರು ಕ್ರಿಕೆಟ್ ಆಟಗಾರರಾಗುತ್ತರೆ ಎಂದೇ ನಾನು ತಿಳಿದಿದ್ದೆ ನಟರಾಗುತ್ತಾರೆ ಎಂದಲ್ಲ. ಅವರು ಸಣ್ಣ ಹುಡುಗನಾಗಿದ್ದಾಗ ಇಲ್ಲಿ ಕ್ರಿಕೆಟ್ ಆಡಲು ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದುದು ನನಗಿನ್ನೂ ನೆನಪಿದೆ. ಬ್ಯಾಟ್ ಮತ್ತು ಬಾಲಿನ ಆಟ ಎಂದರೆ ಅವರಿಗೆ ಹುಚ್ಚು. ಅವರು ಚೆನ್ನೈಗೆ ಹಿಂದಿರುಗುವಾಗ ತೆಗೆದುಕೊಂಡು ಹೋಗುತ್ತಿದ್ದ ಒಂದೇ ವಸ್ತುವೆಂದರೆ ಕ್ರಿಕೆಟ್ ಸೆಟ್" ಎಂದಿದ್ದಾರ ಗೋವಿಂದು.
ಸಾ ರಾ ಗೋವಿಂದು ಅವರಿಗೆ ಅಭಿನಂದನೆ ಸಲ್ಲಿಸಿದ ಶಿವರಾಜಕುಮಾರ್ ಕನ್ನಡ ಸಿನೆಮಾಗಳನ್ನು ಮಂಡಲಿಯಿಂದ ಉತ್ತೇಜಿಸಬೇಕೆಂಬುದಷ್ಟೇ ನನ್ನ ಒಂದು ಕೋರಿಕೆ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಯಶ್, ರಾಕ್ಲೈನ್ ವೆಂಕಟೇಶ್, ಸಂಚಾರಿ ವಿಜಯ್ ಮತ್ತು ಲಹರಿ ವೇಲು ಉಪಸ್ಥಿತರಿದ್ದರು. ಕನ್ನಡ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲಕ್ಕೆ ನವೆಂಬರ್ ೨೦ ರಂದು ಸಿನೆಮಾ ತೆರೆ ಕಾಣಲಿದೆ.
Advertisement