ಬೆಂಗಳೂರು: ಎದೆನೋವಿನ ತೊಂದರೆಯಿಂದಾಗಿ ಕೆಲವು ದಿನಗಳ ಹಿಂದೆಯಷ್ಟೇ ಆಸ್ಪತ್ರೆಗೆ ದಾಖಲಾಗಿದ್ದ ನಟ ಡಾ. ಶಿವರಾಜ್ ಕುಮಾರ್ ಕೆಲಸಕ್ಕೆ ಹಿಂದಿರುಗಿದ್ದಾರೆ. ನವೆಂಬರ್ ನಲ್ಲಿ ಚಿತ್ರೀಕರಣವಾಗಲಿರುವ 'ಶ್ರೀಕಂಠ' ಸಿನೆಮಾದ ಮುಹೂರ್ತದಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
"ವೈದ್ಯರ ಸಲಹೆಯಂತೆ ನಾನು ದಿನಾಲು ಮಾಡುವ ದೀರ್ಘ ಕಾಲದ ವ್ಯಾಯಾಮವನ್ನು ಕಡಿತಗೊಳಿಸಬೇಕಾಯಿತು ಮತ್ತು ನನ್ನ ದೇಹಕ್ಕೆ ೩ ವಾರಗಳ ವಿಶ್ರಾಂತಿ ನೀಡಬೇಕಾಯಿತು. ನವೆಂಬರ್ ೧೦ ರಿಂದ ಸೆಟ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ" ಎಂದು ತಿಳಿಸಿ ಅವರ ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದ್ದಾರೆ.
ಒತ್ತಡವೇ ಎದೆ ನೋವಿಗೆ ಕಾರಣವಾಯಿತು ಎನ್ನುವ ಶಿವರಾಜ್ ಕುಮಾರ್ "ನನ್ನ ಮಗಳ ಮದುವೆ ಕಾರ್ಯಕ್ರಮ ದೈಹಿಕವಾಗಿ ದಣಿವು ಮಾಡಲಿಲ್ಲ ಆದರೆ ಭಾವನಾತ್ಮಕವಾಗಿ ಒತ್ತಡದ ಅನುಭವ. ನನ್ನ ತಿಂಡಿ ತಿನಿಸುಗಳ ಬಗ್ಗೆ ನಾನೆಂದೂ ಎಚ್ಚರದಲ್ಲಿರುತ್ತೇನೆ. ಈಗ ಇನ್ನೂ ಹೆಚ್ಚು ಎಚ್ಚರಿಕೆಯಿಂದಿರುತ್ತೇನೆ. ದೇವರ ದಯೆ ನನಗೆ ಕೊಲೆಸ್ಟ್ರಾಲ್ ಆಗಲಿ ಅಥವಾ ರಕ್ತದೊಟ್ಟಡವಾಗಲೀ ಇಲ್ಲ. ನನ್ನ ರಕ್ತದಲ್ಲಿ ಬರೀ ನಟನೆಯಿದೆ" ಎನ್ನುತ್ತಾರೆ ಶಿವಣ್ಣ.
ಪ್ರಮುಖ ನಿರ್ಧಾರಗಳನ್ನು ಮನೆಯಲ್ಲಿರುವ ಮಹಿಳೆಯರೇ ತೆಗೆದುಕೊಳ್ಳುವುದು ಎನ್ನುವ ಶಿವಣ್ಣ "ಮುಂದಿನ ನಡೆಗಳನ್ನು ಸ್ವಲ್ಪ ನಿಧಾನವಾಗಿ ಇಡುವಂತೆ ಅವರು ಸೂಚಿಸಿದ್ದಾರೆ. ನನ್ನ ಸುತ್ತ ನನ್ನ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅವರು ಹೇಳಿದಷ್ಟು ಮಾಡಿದರಾಯಿತು. ಆದರೆ ನನ್ನ ಸಿನೆಮಾ ಪ್ಯಾಶನ್ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ" ಎನ್ನುವ ಅವರು "ನನ್ನ ಜೀವನವನ್ನು ಮತ್ತು ಅದರೊಟ್ಟಿಗೆ ನನ್ನ ವೃತ್ತಿಯನ್ನೂ ಸಮಾನವಾಗಿ ಪ್ರೀತಿಸುತ್ತೇನೆ" ಎನ್ನುತ್ತಾರೆ.
'ಶ್ರೀಕಂಠ' ಸಿನೆಮಾವನ್ನು ಮಂಜು ಸ್ವರಾಜ್ ನಿರ್ದೇಶಿಸುತ್ತಿದ್ದರೆ, ನಿರ್ಮಾಪಕ ಚಿಂಗಾರಿ ಮಾದೇಶ್. ಸದ್ಯಕ್ಕೆ 'ಶಿವಲಿಂಗ' ಮತ್ತು 'ಕಿಲ್ಲಿಂಗ್ ವೀರಪ್ಪನ್' ಸಿನೆಮಾಗಳ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. "ಇಬ್ಬರು ವಿಶಿಷ್ಟ ನಿರ್ದೇಶಕರಾದ ಪಿ ವಾಸು ಮತ್ತು ರಾಮ್ ಗೋಪಾಲ್ ವರ್ಮಾ ಅವರೊಂದಿಗೆ ಕೆಲಸ ಮಾಡಿದ್ದು ಸಂತಸದ ಅನುಭವ" ಎನ್ನುತ್ತಾರೆ ಶಿವಣ್ಣ.
ಕಿಲ್ಲಿಂಗ್ ವೀರಪ್ಪನ್ ಮೂರು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು ಎಲ್ಲ ಭಾಷೆಗಳಲ್ಲೂ ಶಿವರಾಜ್ ಕುಮಾರ್ ಅವರೇ ಡಬ್ ಮಾಡುತ್ತಿರುವುದು ವಿಶೇಷ
Advertisement