ಅಭಿಮಾನಿಗಳಲ್ಲಿ ಈಗಾಗಲೇ ಸಂಚಲನ ಮೂಡಿಸುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 25ನೇ ಸಿನಿಮಾ ಚಕ್ರವ್ಯೂಹ ಬಿಡುಗಡೆಗೆ ಸಿದ್ಧವಾಗಿದ್ದು, ಕುತೂಹಲಗಳನ್ನು ಹೆಚ್ಚು ಮಾಡಿದೆ. 1 ವರ್ಷದ ನಂತರ ಪುನೀತ್ ಮತ್ತೆ ಪುನೀತ್ ಅವರ ಚಿತ್ರ ತೆರೆಗೆ ಬರುತ್ತಿದೆ.
ಕಾಲಿವುಡ್ ನಿಂದ ಸ್ಯಾಂಡಲ್ ವುಡ್ ಗೆ ಕಾಲಿಟ್ಟಿರುವ ನಿರ್ದೇಶಕ ಶರವಣನ್ ಅವರು ತಮ್ಮ ಮೊದಲನೇ ಚಿತ್ರವನ್ನು ಪುನೀತ್ ರಾಜ್ ಕುಮಾರ್ ಅವರೊಂದಿಗೆ ಮಾಡಿದ್ದು, ಅವರ ಕುತೂಹಲ ಹಾಗೂ ಅನುಭವವನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಚಿತ್ರದ ಬಗ್ಗೆ ಮಾತನಾಡಿರುವ ಶರವಣನ್ ಅವರು, ಕನ್ನಡ ಚಿತ್ರದ ನಿರ್ದೇಶನ ಮಾಡುವ ಮೂಲಕ ಸಾಕಷ್ಟು ವಿಭಿನ್ನ ಅನುಭವಗಳನ್ನು ಪಡೆದುಕೊಂಡಿದ್ದೇನೆ. ಇನ್ನು ಚಿತ್ರ ಬಿಡುಗಡೆ ದಿನಾಂಕ ಬಹಳ ಹತ್ತಿರವಿದ್ದು, ಸಾಕಷ್ಟು ಕುತೂಹಲಭರಿತನಾಗಿದ್ದೇನೆಂದು ಹೇಳಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಹಿಟ್ ಕೊಟ್ಟಿರುವಂತಹ ಚಿತ್ರವಿದು. ಇನ್ನು ಕನ್ನಡದಲ್ಲಿಯೂ ಸ್ಟಾರ್ ನಟ ಅಭಿನಯಿಸಿದ್ದಾರೆ. ಒತ್ತಡ ಎಂಬುದು ಸಾಮಾನ್ಯವಾಗಿಯೇ ಇರುತ್ತದೆ. ಸಿನಿಮಾದ ಮೊದಲ ಶೋ 3 ಗಂಟೆಗೆ ಹೋಗುತ್ತಿದೆ. ಇದೇ ಮೊದಲ ಬಾರಿಗೆ ಈ ರೀತಿಯ ಅನುಭವವಾಗುತ್ತಿರುವುದು. ಸಾಕಷ್ಟು ಕುತೂಹಲ ಹಾಗೂ ಸಂತಸವಿದೆ.
ನಾನು ಈಗಾಗಲೇ ತೆಲುಗು ಚಿತ್ರವನ್ನು ನಿರ್ದೇಶಿಸಿದ್ದೇನೆ. ಇನ್ನು ಕನ್ನಡದಲ್ಲಿ ನಿರ್ದೇಶಿಸಿರುವುದು ಇದೇ ಮೊದಲ ಸಿನಿಮಾ. ಸಿನಿಮಾ ವಿಚಾರಕ್ಕೆ ಬಂದರೆ ಭಾಷೆ ಮುಖ್ಯವಾಗುವುದಿಲ್ಲ. ಕಥೆಯನ್ನು ವಿಭಿನ್ನ ರೀತಿಯಲ್ಲಿ ಹೇಳಬಹುದು. ಆದರೆ, ಅದರ ಭಾವನೆ ಒಂದೇ ಆಗಿರುತ್ತದೆ ಎಂದಿದ್ದಾರೆ.
ಇದೇ ವೇಳೆ ಸಿನಿಮಾ ನಿರ್ದೇಶನದ ತಮ್ಮ ಪ್ರಯಾಣ ಕುರಿತಂತೆ ಮಾತನಾಡಿರುವ ಅವರು, ಪುನೀತ್ ರಾಜ್ ಕುಮಾರ್ ಒಬ್ಬ ಮಾಸ್ ಹೀರೋ. ಶೂಟಿಂಗ್ ಗಾಗಿ ಎಲ್ಲಿಯೇ ಹೋದರೂ ಅಲ್ಲಿ ಅವರ ಅಭಿಮಾನಿಗಳಿರುತ್ತಿದ್ದರು. ಆ ಸಮಯದಲ್ಲಿ ಶೂಟಿಂಗ್ ಗೆ ಸ್ವಲ್ಪ ತೊಂದರೆಯಾಗುತ್ತಿತ್ತು. ಒಂದು ರೀತಿಯಲ್ಲಿ ಹೇಳಬೇಕಾದರೆ ಇದು ನನಗೆ ಸಹಾಯಕವಾಯಿತು. ನಟನ ವರ್ಚಸ್ಸು ಅರ್ಥಮಾಡಿಕೊಳ್ಳಲು ಸಹಾಯವಾಯಿತು. ಚಕ್ರವ್ಯೂಹವೊಂದು ಒಬ್ಬ ವ್ಯಕ್ತಿಯ ನೈಜ ಕಥೆಯಾಧರಿಸಿ ನಿರ್ದೇಶಿಸಲಾಗಿದೆ. ತಮಿಳು ಚಿತ್ರರಂಗಕ್ಕೂ ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಪುನೀತ್ ಗಾಗಿ ಚಕ್ರವ್ಯೂಹದಲ್ಲಿ ಚಿತ್ರದ ಕಥೆ ಹಾಗೂ ಹಿನ್ನೆಲೆಯನ್ನು ಬದಲಿಸಲಾಗಿದೆ.
ಕನ್ನಡ ಸ್ಟಾರ್ ನಟರೊಂದಿಗೆ ಕೆಲಸ ಮಾಡಿರುವುದು ಬಹಳ ಸಂತಸದ ವಿಚಾರ. ಬೇರೆ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದವರು ಸ್ನೇಹ ಜೀವಿಗಳು ಎಂದು ಹೇಳಿದ್ದಾರೆ.
ಸಾಧುಕೋಕಿಲಾ ಅವರನ್ನು ಹೊಗಳಿದ ಅವರು, ಸೆಟ್ ನಲ್ಲಿ ಸಾಧು ನನಗೆ ಸಾಕಷ್ಟು ಸಹಾಯ ಮಾಡಿದರು. ಸಾಧು ಅವರಿಗೆ ತಮಿಳು ಗೊತ್ತಿತ್ತು. ನನ್ನ ಆಲೋಚನೆ ಹಾಗೂ ಭಾವನೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದರು. ನಂತರ ಚಿತ್ರದ ಎಲ್ಲಾ ನಟರಿಗೆ ಅದನ್ನು ಅರ್ಥ ಮಾಡಿಸುತ್ತಿದ್ದರು ಎಂದು ಹೇಳಿದ್ದಾರೆ.
ಪ್ರಸ್ತುತ ಯಾವುದೇ ಚಿತ್ರದಲ್ಲೂ ಕೆಲಸ ಮಾಡಲು ಒಪ್ಪಿಕೊಂಡಿಲ್ಲ. ಚಕ್ರವ್ಯೂಹ ಬಿಡುಗಡೆಗಾಗಿ ಕಾಯುತ್ತಿದ್ದೇನೆ. ನಂತರವಷ್ಟೇ ಮುಂದಿನ ಪ್ರಾಜೆಕ್ಟ್ ಗೆ ಕೈ ಹಾಕುತ್ತೇನೆಂದು ಹೇಳಿದ್ದಾರೆ.
Advertisement