ಪೂರಿ ಜಗನ್ನಾಥ್ ನವ ಪ್ರತಿಭೆಗಳಿಗೆ ಲಕ್ಕಿ ನಿರ್ದೇಶಕ
ತೆಲುಗು ಹಾಗೂ ಕನ್ನಡದಲ್ಲಿ ನವ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ಹೊಸಬರಿಗೆ ಲಕ್ಕಿ ನಿರ್ದೇಶಕರಾಗಿರುವ ಪುರಿ ಜಗನ್ನಾಥ್ ಇದೀಗ ರೋಗ್ ಚಿತ್ರದ ಮೂಲಕ ನಿರ್ಮಾಪಕ ಸಿಆರ್ ಮನೋಹರ್ ಸೋದರಳಿಯ ಇಶಾನ್ ಗೆ ಗುರುವಾಗಿದ್ದಾರೆ.
ಕನ್ನಡದಲ್ಲಿ ಶಿವರಾಜ್ ಕುಮಾರ್ ಜತೆ ಯುವರಾಜ ಚಿತ್ರ ನಿರ್ದೇಶಿಸಿದ್ದ ಪೂರಿ ಜಗನ್ನಾಥ್ ನಂತರ ಪುನೀತ್ ರಾಜ್ ಕುಮಾರ್ ಹಿರೋ ಆಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅಪ್ಪು ಚಿತ್ರ ನಿರ್ದೇಶಿಸಿ ಬ್ಲಾಕ್ ಬಸ್ಟರ್ ಚಿತ್ರ ನೀಡುವ ಪುನೀತ್ ಗೆ ಸ್ಟಾರ್ ಗಿರಿ ತಂದಕೊಟ್ಟಿದ್ದರು.
ಇದೀಗ ಮತ್ತೆ ಸ್ಯಾಂಡಲ್ ವುಡ್ ಗೆ ರೀ ಎಂಟ್ರಿ ಕೊಟ್ಟಿರುವ ಪೂರಿ ಜಗನ್ನಾಥ್ ರೋಗ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರೀಕರಣ ಮುಗಿದಿದ್ದು ಚಿತ್ರದ ಪೋಸ್ಟ್ ಪ್ರೋಡಕ್ಷನ್ ಕೆಲಸಗಳು ನಡೆಯುತ್ತಿವೆ. ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಚಿತ್ರ ನಿರ್ಮಾಣವಾಗುತ್ತಿದೆ.
ತೆಲುಗಿಗೆ ಡಬ್ಬಿಂಗ್ ಮುಗಿದ ನಂತರ ಮುಂದಿನ ತಿಂಗಳು ಆಡಿಯೋ ಬಿಡುಗಡೆಗೆ ಚಿತ್ರತಂಡ ಯೋಜನೆಯನ್ನು ಹಾಕಿಕೊಂಡಿದೆ.
ಇನ್ನು ನಿರ್ಮಾಪಕ ಸಿಆರ್ ಮನೋಹರ್ ಮಾತನಾಡಿ, ರೋಗ್ ಚಿತ್ರದಲ್ಲಿ ಅದ್ಭುತ ತಂತ್ರಜ್ಞರು ಹಾಗೂ ಖ್ಯಾತ ನಟ-ನಟಿಯರು ಅಭಿನಯಿಸುತ್ತಿದ್ದಾರೆ. ಹಲವು ಚಿತ್ರಗಳನ್ನು ನಿರ್ಮಿಸಿದ್ದೇನೆ ಅವುಗಳಲ್ಲಿ ಇದೇ ಅಗ್ರಗಣ್ಯ ಚಿತ್ರವಾಗಲಿದೆ ಎಂದರು. ನವ ಪ್ರತಿಭೆಗಳಿಗೆ ಪೂರಿ ಜಗನ್ನಾಥ್ ಲಕ್ಕಿ ನಿರ್ದೇಶಕ. ಅವರ ನಿರ್ದೇಶನದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಪುನೀತ್ ರಾಜ್ ಕುಮಾರ್ ಹಾಗೂ ರಾಮ್ ಚರಣ್ ತೇಜಾ ಹೀಗೆ ಹಲವು ನಟರು ಸ್ಟಾರ್ ಪಟ್ಟ ಅಲಂಕರಿಸಿದ್ದಾರೆ ಎಂದರು.
ಇದಕ್ಕೂ ಮುನ್ನ ರಾಘವೇಂದ್ರ ರಾಜ್ ಕುಮಾರ್ ಮಗ ವಿನಯ್ ರಾಜ್ ನಟಿಸಲಿರುವ ಮೊದಲ ಚಿತ್ರವನ್ನು ಪೂರಿಯೇ ನಿರ್ದೇಶಿಸಬೇಕಿತ್ತು. ಆದರೆ ಅದು ನಿಂತು ಹೋಗಿತ್ತು. ನಂತರ ಎಚ್ ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರ್ ಚಿತ್ರವನ್ನು ಪೂರಿ ನಿರ್ದೇಶಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಈ ಚಿತ್ರ ಇನ್ನೇನು ಸೆಟ್ಟೇರಬೇಕೆನ್ನುವಷ್ಟರಲ್ಲಿ ಕಾರಣಾಂತರದಿಂದ ಈ ಚಿತ್ರವೂ ನಿಂತುಹೋಯಿತು.