ಬೆಂಗಳೂರು: ಎಸ್ ಕೃಷ್ಣ ನಿರ್ದೇಶನದ 'ಹೆಬ್ಬುಲಿ'ಯಲ್ಲಿ ಸಹೋದರಾಗಿ ನಟಿಸಿರುವ ನಟ ರವಿಚಂದ್ರನ್ ಮತ್ತು ಸುದೀಪ್ ಅವರಿಗೆ ಇದು ಪಾರ್ಟಿ ಸಮಯ. ಅರ್ಜುನ್ ಜನ್ಯ ಸಂಗೀತದಲ್ಲಿ ಮತ್ತು ಹರ್ಷ ನೃತ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವ ಹಾಡಿಗೆ ಈ ಜೋಡಿ ಹೆಜ್ಜೆ ಹಾಕಲಿದ್ದಾರೆ.
ಮುಂದಿನ ನಾಲ್ಕು ದಿನಗಳ ಕಾಲ ದೇವನಹಳ್ಳಿಯ ರೆಸಾರ್ಟ್ ಒಂದರಲ್ಲಿ ಚಿತ್ರೀಕರಣ ನಡೆಯಲಿದೆಯಂತೆ. ರವಿಚಂದ್ರನ್ ಮತ್ತು ಸುದೀಪ್ ನಡುವೆ ಕೆಲವು ವರ್ಷಗಳಿಂದ ಒಂದು ವಿಶೇಷ ಬಾಂಧವ್ಯ ಬೆಳೆದಿದ್ದು, ಇದು ಸಿನೆಮಾದ ಮುಖ್ಯಅಂಶಗಳಲ್ಲಿ ಒಂದು ಎನ್ನಲಾಗಿದೆ.
ಈ ಹಿಂದೆ ಈ ಜೋಡಿ 'ಮಾಣಿಕ್ಯ' ಸಿನೆಮಾದಲ್ಲಿ ತಂದೆ ಮಗನಾಗಿ ನಟಿಸಿದ್ದರು. ಈಗ ಸುದೀಪ್ ಅವರ ಪರಿಚಯಾತ್ಮಕ ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ.
ಚಿತ್ರೀಕರಣದ ನಂತರದ ಕೆಲಸಗಳು ಕೂಡ ಭರದಿಂದ ಸಾಗಿದ್ದು, ಡಿಸೆಂಬರ್ ೧೫ ಕ್ಕೆ ಅದ್ದೂರಿ ಆಡಿಯೋ ಬಿಡುಗಡೆಗೆ ಚಿತ್ರತಂಡ ಸಜ್ಜಾಗುತ್ತಿದೆ. ದಾವಣಗೆರೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯ ಸಂಗೀತ ಕಾರ್ಯಕ್ರಮ ನಡೆಸಿಕೊಳ್ಳಲಿದ್ದಾರೆ.
ಎಲ್ಲವು ನಿಗದಿಯಾದಂತೆ ನಡೆದರೆ, ಹೊಸವರ್ಷಕ್ಕೆ 'ಹೆಬ್ಬುಲಿ' ಸಿನೆಮಾ ಬಿಡುಗಡೆಯಾಗಲಿದೆ. ಜನವರಿ ಎರಡನೇ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿರುವ ಈ ಚಿತ್ರದಲ್ಲಿ ಅಮಲಾ ಪಾಲ್ ನಾಯಕನಟಿ.