ಮುಜಾಫರ್ಪುರ: ಬಾಲಿವುಡ್ ಸೂಪರ್ ಸ್ಟಾರ್ ನಟ ಸಲ್ಮಾನ್ ಖಾನ್, ನಟಿ ಅನುಷ್ಕಾ ಶರ್ಮಾ ಹಾಗೂ ಸುಲ್ತಾನ್ ಚಿತ್ರ ನಿರ್ದೇಶಕ ಅಲಿ ಜಾಫರ್ ಅಬ್ಬಾಸ್ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಮುಜಾಫರ್ನಗರದ ನಿವಾಸಿಯಾಗಿರುವ ಮೊಹಮ್ಮದ್ ಸಬೀರ್ ಅನ್ಸಾರಿ ಅಲಿಯಾಸ್ ಸಬೀರ್ ಬಾಬಾ ಎಂಬುವವರು ಚೀಫ್ ಜ್ಯೂಡಿಷಿಯರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಜು.8 ರಂದು ದೂರು ದಾಖಲಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದೂರಿನಲ್ಲಿ ಸಬೀರ್ ಬಾಬಾ ಅವರು, 2010 ರಲ್ಲಿ ಮುಂಬೈ ನಲ್ಲಿ ಸಲ್ಮಾನ್ ಖಾನ್ ಅವರಿಗೆ ನನ್ನ ಜೀವನದ ಕಥೆಯೊಂದನ್ನು ಹೇಳಿಕೊಂಡಿದ್ದೆ. ಒಂದು ವೇಳೆ ಈ ಕಥೆಯನ್ನು ಸಿನಿಮಾ ಮಾಡಿದರೆ ರು.20 ಕೋಟಿ ಹಣವನ್ನು ನೀಡುವುದಾಗಿ ಅವರು ಭರವಸೆಯನ್ನು ನೀಡಿದ್ದರು. ಚಿತ್ರ ನಿರ್ಮಾಣವಾಗಿ ಕಳೆದ ವಾರ ಬಿಡುಗಡೆಗೊಂಡಿದೆ. ಆದರೆ, ಈ ವರೆಗೂ ನಟನಾಗಲಿ, ನಿರ್ಮಾಪಕ, ನಿರ್ದೇಶಕರಾಗಿಲಿ ನನಗೆ ಹಣವನ್ನು ನೀಡಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇದರಂತೆ ವಿಚಾರಣೆ ನಡೆಸಿರುವ ಮುಜಾಫರ್ನಗರದ ಚೀಫ್ ಜ್ಯುಡಿಷಿಯರ್ ಮ್ಯಾಜಿಸ್ಟ್ರೇಟ್ ರಾಮ್ ಚಂದ್ರ ಪ್ರಸಾದ್ ಅವರು, ನಿನ್ನೆ ಪ್ರಕರಣವನ್ನು ಪ್ರಥಮ ಶ್ರೇಣಿಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಸ್.ಕೆ. ತ್ರಿಪಾಠಿ ಅವರಿಗೆ ವರ್ಗಾಯಿಸಿದ್ದು, ಜುಲೈ. 26ಕ್ಕೆ ವಿಚಾರಣೆಯನ್ನು ನಿಗದಿಗೊಳಿಸಿದ್ದಾರೆ.
ಪ್ರಸ್ತುತ ನಟ ಸಲ್ಮಾನ್ ಖಾನ್, ನಟಿ ಅನುಷ್ಕಾ ಶರ್ಮಾ ಹಾಗೂ ನಿರ್ದೇಶಕರ ವಿರುದ್ಧ ಐಪಿಸಿ ಸೆಕ್ಷನ್ 420 ( ವಂಚನೆ), 406 ((ವಿಶ್ವಾಸ ವಂಚನೆ ಶಿಕ್ಷೆ), 504 (ಉದ್ದೇಶಪೂರ್ವಕ ಅವಮಾನ), 506 (ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ.
Advertisement